ನವಲಗುಂದ: ಪಟ್ಟಣದ ಆರನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪಾಟೀಲ ಪ್ಲಾಟ್ ಹಾಗೂ ವಿಶ್ವಗಂಗಾ ನಗರಕ್ಕೆ ಹೋಗುವ ಮುಖ್ಯ ರಸ್ತೆ ತುಂಬಾ ಹದಗೆಟ್ಟಿದ್ದು ದುರಸ್ತಿ ಮಾಡಿಸುವಂತೆ ವರ್ಷಗಳಿಂದಲೇ ಪುರಸಭೆಗೆ ಅಲೆದರೂ ಕೆಲಸ ಮಾಡುತ್ತಿಲ್ಲವೆಂದು ನಿವಾಸಿ ಮಹಬೂಬ್ ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಮಳೆಯಾದರಂತೂ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ವಯೋವೃದ್ಧರಿಗೆ ರಾಡಿ ಮಣ್ಣಿನಲ್ಲಿ ಹಾದು ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸಬೇಕಾಗಿದೆ.
ಗಣ್ಯ ವ್ಯಕ್ತಿಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ, ದುರಸ್ತಿ ಕಾಮಗಾರಿಯನ್ನು ಕೈಗೊಂಡಿಲ್ಲ. ಟೆಂಡರ್ ಕರೆಯಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ದುರಸ್ತಿ ಮಾತ್ರ ಆಗಿಲ್ಲ ಎಂದು ಮಹಬೂಬ ಬೇಸರ ವ್ಯಕ್ತಪಡಿಸಿದ್ದಾರೆ.
ವಾರ್ಡ್ ಸದಸ್ಯ ರೆಹಮಾನಸಾಬ್ ಧಾರವಾಡ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಗರೋತ್ಥಾನ ಎರಡನೇ ಹಂತದ ಯೋಜನೆಯಲ್ಲಿ ದುರಸ್ತಿ ಮಾಡಲಾಗುವುದು. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.