ಶಿವಮೊಗ್ಗ: ಭಾರತದಲ್ಲಿ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ಪರಿಪಾಠವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಹೊಡೆಯಲು ಕೈ ಎತ್ತಿದರೆ ಅದನ್ನೇ ಕತ್ತರಿಸುತ್ತಾರೆ ಎಂಬ ಸಂದೇಶ ಚೀನಾಕ್ಕೆ ತಲುಪಿದೆ ಎಂದು ಶಾಸಕ ಸಿ.ಟಿ. ರವಿ ಗುಡುಗಿದರು.
ಕುವೆಂಪು ರಂಗಮಂದಿರದಲ್ಲಿ ಸಾಮಗಾನ ಸಂಸ್ಥೆ ಮಂಗಳವಾರ ಸಂಜೆ ಆಯೋಜಿಸಿದ್ದ ಯುವ ಸ್ಪಂದನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಎಂದರೆ ಚೀನಾಕ್ಕೆ ಭಯವಿದೆ. ದೇಶದ ಒಳಗೆ ಇರುವ ಕೆಲವರು ಚೀನಾದ ಪರ ತುತ್ತೂರಿ ಊದುತ್ತಿದ್ದಾರೆ. ಅವರು ಯಾರನ್ನು ತೃಪ್ತಿಪಡಿಸಲು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಟೀಕಿಸಿದರು.
1962 ರಲ್ಲಿ ಇದ್ದ ಭಾರತದ ನಾಯಕತ್ವ 2017 ರಲ್ಲಿ ಇಲ್ಲ ಎಂಬುದು ದೋಕಲಾ ಘಟನೆಯಲ್ಲಿ ಚೀನಾಕ್ಕೆ ಮನವರಿಕೆಯಾಗಿದೆ. ಇದರಿಂದಾಗಿಯೇ ಚೀನಾ ಹಿಂದೆ ಸರಿದಿದೆ. ಆದರೂ, ಕೆಲವರು ಚೀನಾ ಮುಂದೆ ಭಾರತ ದುರ್ಬಲ ಎಂಬ ಸುದ್ದಿ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನ್ನ ಕಳಪೆ ವಸ್ತುಗಳ ಮೂಲಕ ಭಾರತದ ಮಾರುಕಟ್ಟೆಯನ್ನೇ ಅಕ್ರಮಿಸಿಕೊಂಡಿರುವ ಚೀನಾ ಸ್ನೇಹದ ಹಸ್ತ ಬಿಟ್ಟು ಕದನಕ್ಕೆ ಹಾತುಹೊರೆಯುತ್ತಿದೆ. ಬೇರೆ ಬೇರೆ ರಾಷ್ಟ್ರಗಳ ಮೂಲಕ ಭಾರತದ ನೆಲ ಅಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಭಾರತ ತಕ್ಕ ಉತ್ತರ ನೀಡಲಿದೆ ಎಂದರು. ‘ಏಕ ಭಾರತ ವಿಜೇತ ಭಾರತ’ ವಿಷಯ ಕುರಿತು ನಿತ್ಯಾನಂದ ವಿವೇಕವಂಶಿ ಉಪನ್ಯಾಸ ನೀಡಿದರು.