ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಾಹಿತಿ ಹಕ್ಕು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ವೈ.ಜಿ.ಮುರಳೀಧರನ್

ಅನುಷ್ಠಾನಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ನಾಗರಿಕಸ್ನೇಹಿ ಕಾನೂನು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಹಿತಿ ಹಕ್ಕು ಅಧಿನಿಯಮವು ಆಕರ್ಷಣೆ ಕಳೆದುಕೊಳ್ಳುವ ಸೂಚನೆ ಕಂಡುಬರುತ್ತಿದೆ.

ಹನ್ನೆರಡು ವರ್ಷಗಳ ಹಿಂದೆ ಇದೇ ದಿನ (2005ರ ಅ.12) ಜಾರಿಗೆ ಬಂದ ಈ ಕಾನೂನಿನ ಮುಖ್ಯ ಉದ್ದೇಶ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರುವುದು; ನಾಗರಿಕರಿಗೆ ಶೀಘ್ರವಾಗಿ, ಸುಲಭವಾಗಿ, ಅತ್ಯಲ್ಪ ವೆಚ್ಚದಲ್ಲಿ ಮಾಹಿತಿ ಕೊಡುವುದು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು.

ಈ ಉದ್ದೇಶಗಳನ್ನು ಸಾಕಾರಗೊಳಿಸಲು ಇಲಾಖೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಾಹಿತಿ ಪಡೆಯುವ ವಿಷಯದಲ್ಲಿ ತಲೆದೋರುವ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಮಾಹಿತಿ ಆಯೋಗವನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.

ನಾಗರಿಕರು ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳಿಗೆ ಶೀಘ್ರವಾಗಿ ಪ್ರತಿಕ್ರಿಯೆ ದೊರೆಯುತ್ತಿತ್ತು. ಮಾಹಿತಿ ನಿರಾಕರಿಸುವ ಪ್ರಕರಣಗಳು ವಿರಳವಾಗಿದ್ದವು. ಮಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಈ ಅಧಿನಿಯಮದ ಜಾರಿಯಲ್ಲಿ ಅನೇಕ ತೊಡರುಗಳು ಕಾಣಿಸಿಕೊಂಡಿವೆ. ಮುಖ್ಯವಾಗಿ, ಸಾರ್ವಜನಿಕ ಪ್ರಾಧಿಕಾರಗಳು ಸ್ವಪ್ರೇರಣೆಯಿಂದ ಪ್ರಕಟಿಸಬೇಕಾದ ಮಾಹಿತಿಯನ್ನು ಸಮರ್ಪಕವಾಗಿ ಪ್ರಕಟಿಸುತ್ತಿಲ್ಲ. ಬಹುತೇಕ ಪ್ರಾಧಿಕಾರಗಳ ವೆಬ್‍ಸೈಟ್‍ನಲ್ಲಿ 2012ರಲ್ಲಿ ಅಥವಾ ಅದಕ್ಕೂ ಹಿಂದೆ ಪ್ರಕಟಿಸಿದ ಮಾಹಿತಿಯೇ ಮುಂದುವರಿಯುತ್ತಿದೆ. ಅಧಿನಿಯಮದಲ್ಲಿ ಈ ಲೋಪಕ್ಕೆ ಯಾವುದೇ ದಂಡವಿಲ್ಲ. ಸ್ವಯಂ ಪ್ರೇರಣೆಯಿಂದ ಪ್ರಕಟಿಸಬೇಕಾದ ಮಾಹಿತಿಯನ್ನು ಪ್ರಕಟಿಸಿದಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ.

ಮಾಹಿತಿ ಹಕ್ಕು ವಿಷಯದಲ್ಲಿ ಆಯೋಗದ ಕಾರ್ಯ ವೈಖರಿಯಿಂದ ನಾಗರಿಕರು ಬೇಸರಗೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಷ್ಟು ಸಾರ್ವಜನಿಕ ಪ್ರಾಧಿಕಾರಗಳಿವೆ ಮತ್ತು ಅವುಗಳಲ್ಲಿ ಎಷ್ಟು ಪ್ರಾಧಿಕಾರಗಳು ಪ್ರಕಟಿಸಬೇಕಾದ ಮಾಹಿತಿಯನ್ನು ಸ್ವಪ್ರೇರಣೆಯಿಂದ ಪ್ರಕಟಿಸಿವೆ ಎಂಬ ಮಾಹಿತಿ
ಯನ್ನು ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಕೊಡಬೇಕು.ವರದಿಯಲ್ಲಿ ಇದರ ಪ್ರಸ್ತಾಪವಿದ್ದರೂ ಅಂಕಿ ಅಂಶ ಲಭ್ಯವಿಲ್ಲ.

ಆಯೋಗದ ವೆಬ್‍ಸೈಟ್‌ನಲ್ಲಿ 2014-15ನೇ ಸಾಲಿನವರೆಗೆ ಮಾತ್ರ ವಾರ್ಷಿಕ ವರದಿ ಲಭ್ಯ. 2015-16 ಮತ್ತು 2016-17ರ ವಾರ್ಷಿಕ ವರದಿ ಎಂದು ಬೆಳಕು ಕಾಣಬಹುದು? ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳ ರಾಶಿ ದಿನೇ ದಿನೇ ಬೆಳೆಯುತ್ತಿದೆ. ಈಗ ಆಯೋಗದಲ್ಲಿ ಸುಮಾರು 35,000 ಅರ್ಜಿಗಳು ಬಾಕಿ ಉಳಿದಿವೆ. ವಿಚಾರಣೆಯನ್ನು ಮುಂದೂಡುವ ಕಾರಣಕ್ಕೂ ನಾಗರಿಕರು ಅಸಮಾಧಾನಗೊಂಡಿದ್ದಾರೆ.

ನಾಗರಿಕರ ಅಸಹನೆಗೆ ಕಾರಣವಾದ ಮತ್ತೊಂದು ವಿಚಿತ್ರ ನಿಯಮ ಇದೆ. ಅದೆಂದರೆ, ಒಂದುವೇಳೆ ಯಾವುದೋ ಮಾಹಿತಿ ನೀಡಿಕೆ ವಿಳಂಬವಾಗಿ ನಾಗರಿಕರು ಆ ಬಗ್ಗೆ ದೂರು ನೀಡಿದ್ದಾರೆ ಎಂದುಕೊಳ್ಳೋಣ.

ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ಮಾಹಿತಿ ಕೋರಿ ಅರ್ಜಿ ಸಲ್ಲಿಸುವಾಗ ಯಾರು ಮಾಹಿತಿ ಅಧಿಕಾರಿಯಾಗಿದ್ದರು ಮತ್ತು ಆಯೋಗದಲ್ಲಿ ಮೇಲ್ಮನವಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆ ಅಧಿಕಾರಿ ಎಲ್ಲಿದ್ದಾರೆ ಎಂಬುದನ್ನು ಅರ್ಜಿದಾರರೇ ಪತ್ತೆಹಚ್ಚಿ ತಿಳಿಸಬೇಕು ಎಂದು ಆಯೋಗ ಹೇಳುತ್ತದೆ ಎಂದು ಮಾಹಿತಿ ಹಕ್ಕು ಹೋರಾಟಗಾರರೊಬ್ಬರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿನಿಯಮದ ಪ್ರಕಾರ ಇಲಾಖಾ ಮಟ್ಟದಲ್ಲಿ ಪ್ರಥಮ ಮೇಲ್ಮನವಿ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಅರ್ಜಿಗಳ ವಿಷಯದಲ್ಲಿ ವಿಚಾರಣೆ ನಡೆಸದ ಕಾರಣ ನಾಗರಿಕರು ಮಾಹಿತಿ ಆಯೋಗದ ಮುಂದೆ ಬರಬೇಕು. ಆದರೆ ಮಾಹಿತಿ ಆಯೋಗ ಈ ರೀತಿಯ ಮೇಲ್ಮನವಿಯನ್ನು ಪುರಸ್ಕರಿಸುತ್ತಿಲ್ಲ. ಕಾರಣ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು.

ಒಟ್ಟಾರೆ ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮದ ಫಲ ದೊರೆಯುತ್ತಿಲ್ಲ. ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನದ ಬಗ್ಗೆ ಗಮನಹರಿಸಲು ರಾಜ್ಯ ಸರ್ಕಾರ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ವರ್ಷಗಳೇ ಆಗಿದೆ. ಅದರ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಮಾಹಿತಿ ಕೇಳುವ ಅರ್ಜಿದಾರರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಮತ್ತು ಕೊಲೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ. ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆ ಎಳೆಯುವವರ (Whistleblower) ರಕ್ಷಣೆಗೆ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಇತ್ತೀಚೆಗಷ್ಟೇ ನೀತಿಯೊಂದನ್ನು ಸಿದ್ಧಪಡಿಸಿವೆ. ಇದರ ಬಗ್ಗೆ ವ್ಯಾಪಕವಾದ ಚರ್ಚೆ ನಡೆದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ನೀತಿಯಲ್ಲಿರುವ ಮುಖ್ಯಾಂಶವನ್ನು ಪ್ರಚುರಪಡಿಸುವುದು ಅಗತ್ಯ.

ಮಾಹಿತಿ ಹಕ್ಕು ಅಧಿನಿಯಮದ ಉದ್ದೇಶ ಮತ್ತು ಅದರ ಇತಿಮಿತಿಗಳನ್ನು ನಾಗರಿಕರು ಅರಿತುಕೊಳ್ಳಬೇಕು. ಅಧಿಕಾರಿಗಳಿಗೆ ಮಾಹಿತಿ ಹಕ್ಕು ಬಗ್ಗೆ ತರಬೇತಿ ನೀಡುವ ಸಮಯದಲ್ಲಿ ಅವರು ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಅಸಮಾಧಾನವನ್ನು ತಳ್ಳಿಹಾಕುವಂತಿಲ್ಲ. ಅರ್ಜಿದಾರರು ಬೃಹತ್ ಪ್ರಮಾಣದ ಮಾಹಿತಿ ಕೇಳುತ್ತಾರೆ ಎಂಬುದು ಅಧಿಕಾರಿಗಳ ದೂರು. ಸುಮಾರು 5,000 ಪುಟಗಳ ಮಾಹಿತಿ ಕೇಳಿದವರೂ ಇದ್ದಾರೆ. 100 ವರ್ಷಕ್ಕೂ ಹಳೆಯದಾದ ಮಾಹಿತಿ ಬಯಸುವವರಿದ್ದಾರೆ.

ಕೇಳಿದ ಮಾಹಿತಿಯನ್ನೇ ಮತ್ತೆ ಮತ್ತೆ ಕೇಳುವುದು ಒಂದು ಅಭ್ಯಾಸವಾಗಿಬಿಟ್ಟಿದೆ. ಅಧಿಕಾರಿಗಳ ಪ್ರಕಾರ ಮತ್ತೊಬ್ಬರ ಹೆಸರು ಮತ್ತು ವಿಳಾಸ ನೀಡಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಸಾಕಷ್ಟು ಶ್ರಮಪಟ್ಟು ಮಾಹಿತಿ ಸಿದ್ಧಪಡಿಸಿ ಅದರ ಬಗ್ಗೆ ಅರ್ಜಿದಾರರಿಗೆ ತಿಳಿಸಿದರೂ, ಅವರು ಅದನ್ನು ಪಡೆದುಕೊಳ್ಳುವುದಿಲ್ಲ. ಸಮಯ, ಶ್ರಮ ಎಲ್ಲವೂ ವ್ಯರ್ಥ ಎಂಬುದು ಅಧಿಕಾರಿಗಳ ವಿವರಣೆ.

ಕೇಳುವ ಮಾಹಿತಿ ಅಥವಾ ದಾಖಲೆ ಲಭ್ಯವಿಲ್ಲದಿರುವುದು ಅಧಿಕಾರಿಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆ. ಇಲಾಖೆಗಳಲ್ಲಿ ಕಡತಗಳ ನಿರ್ವಹಣೆಗೆ ಪ್ರಾಮುಖ್ಯ ದೊರಕಿಲ್ಲವಾದ ಕಾರಣ ಕಡತಗಳು ದೊರೆಯುತ್ತಿಲ್ಲ. ಇದನ್ನು ಸರಿಪಡಿಸದ ಹೊರತು ಮಾಹಿತಿ ಹಕ್ಕು ಸಫಲವಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಪಬ್ಲಿಕ್ ರೆಕಾರ್ಡ್ಸ್‌ ಕಾಯ್ದೆಯನ್ನು ಪ್ರಕಟಿಸಿದೆ.

ಈ ಕಾಯ್ದೆಗೂ ಮಾಹಿತಿ ಹಕ್ಕು ಕಾಯ್ದೆಗೂ ಹತ್ತಿರದ ಸಂಬಂಧವಿರುವ ಕಾರಣ ಸರ್ಕಾರ ಪಬ್ಲಿಕ್ ರೆಕಾರ್ಡ್ಸ್‌ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.

ಕೇಂದ್ರ ಸರ್ಕಾರವು ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ‘ಮಾಹಿತಿ ಹಕ್ಕು ವಾರ’ ಆಚರಿಸಬೇಕೆಂದು ಹೇಳಿದೆ. ಇದಕ್ಕೆ ಬೇಕಾದ ಆರ್ಥಿಕ ಅನುದಾನವನ್ನೂ ನೀಡಲು ಮುಂದಾಗಿದೆ. ಆದರೆ ರಾಜ್ಯ ಸರ್ಕಾರವಾಗಲಿ, ಆಯೋಗವಾಗಲಿ ಇದರ ಉಪಯೋಗ ಪಡೆದಂತೆ ಕಾಣುತ್ತಿಲ್ಲ. ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡುವುದು, ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡುವುದು, ಆಯೋಗ ಮತ್ತು ನ್ಯಾಯಾಲಯದ ಮುಖ್ಯ ತೀರ್ಪುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು, ಕನ್ನಡ ಅನುವಾದ ಪ್ರಕಟಿಸುವುದು, ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಬಳಕೆಯ ಬಗ್ಗೆ ಅರಿವು ಉಂಟು ಮಾಡು

ವುದು ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿತ್ತು. ಮಾಹಿತಿ ಹಕ್ಕು ಅಧಿನಿಯಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ, ಮಾಹಿತಿ ಆಯೋಗ ಮತ್ತು ನಾಗರಿಕ ಸಮಾಜ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಇಲ್ಲದಿದ್ದರೆ ಇದೂ ಸಹ ಇತರೆ ಕಾನೂನುಗಳಂತೆ ಪುಸ್ತಕದಲ್ಲಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT