ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಲಾದೇವಿ ಪ್ರಸಾದ್‌ಗೆ ಜೆ.ಪಿ. ಪ್ರಶಸ್ತಿ ಪ್ರದಾನ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತಯಾತ್ರಾ ಕೇಂದ್ರ– ಪ್ರತಿಭಾ ಕಲಾನಿಕೇತನ ಸಂಸ್ಥೆಯಿಂದ ಸಂಸ್ಕೃತಿ ಚಿಂತಕಿ ಲೀಲಾದೇವಿ ಆರ್‌.ಪ್ರಸಾದ್‌ ಅವರಿಗೆ ಜೆ.ಪಿ ಪ್ರಶಸ್ತಿಯನ್ನು ಬುಧವಾರ ಇಲ್ಲಿ ನೀಡಿ ಗೌರವಿಸಲಾಯಿತು.

ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ಜನ್ಮದಿನಾಚರಣೆ ಹಾಗೂ ಪೌರಾಣಿಕ ನಾಟಕೋತ್ಸವದಲ್ಲಿ ಅವರಿಗೆ ₹ 10,000 ನಗದು ಒಳಗೊಂಡ ಪ್ರಶಸ್ತಿಯನ್ನು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಮತ್ತು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಪ್ರದಾನ ಮಾಡಿದರು.

ಲೀಲಾದೇವಿ ಆರ್‌.ಪ್ರಸಾದ್‌ ಮಾತನಾಡಿ, ‘ರಾಜಕಾರಣವೆಂದರೆ ಅಧಿಕಾರ ಹಿಡಿಯುವುದಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಜೆ.ಪಿ ತೋರಿಸಿದ್ದಾರೆ. ಆದರೆ, ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳಂತಹ ರಾಷ್ಟ್ರಮಟ್ಟದ ಅನೇಕ ನಾಯಕರಲ್ಲಿ ಜೆ.ಪಿಯವರಲ್ಲಿದ್ದ ಗುಣ ಕಾಣಿಸುತ್ತಿಲ್ಲ. ಹಿರಿಯರನ್ನು ಕಡೆಗಣಿಸಿ, ಅಧಿಕಾರವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೆ.ಪಿಯವರ ವಿಚಾರಧಾರೆಗಳು ನಮ್ಮ ರಾಜಕೀಯ ವ್ಯವಸ್ಥೆಗೆ ಮಾರ್ಗದರ್ಶನವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಪ್ರೊ. ಚಂದ್ರಶೇಖರ ಪಾಟೀಲ ಮಾತನಾಡಿ, ‘ಯಾವುದೇ ರಾಜಕಾರಣಿ ಅಧಿಕಾರದ ಅಮಲು ಮೈಗೇರಿಸಿಕೊಂಡರೆ ಸರ್ವಾಧಿಕಾರಿಯಾಗುತ್ತಾನೆ. ಪ್ರಜಾಪ್ರಭುತ್ವ ಕೊಲ್ಲುತ್ತಾನೆ. ಜನರ ಪ್ರೀತಿ, ವಿಶ್ವಾಸ ದುರುಪಯೋಗಪಡಿಸಿಕೊಂಡು, ಭ್ರಷ್ಟಾಚಾರ ಮತ್ತು ಅನೈತಿಕ ಮಾರ್ಗಗಳನ್ನು ನಮಗೆ ಗೊತ್ತಾಗದಂತೆ ವ್ಯವಸ್ಥೆಯೊಳಗೆ ಹರಿಯಬಿಡುತ್ತಾನೆ. ಇಂತಹ ದುಃಸ್ಥಿತಿಯಲ್ಲಿ ನಮ್ಮ ದೇಶ ಇಂದು ಸಿಲುಕಿದೆ. ಜಯಪ್ರಕಾಶ ನಾರಾಯಣ ಅವರಂತಹ ನಿಜವಾದ ನಾಯಕನನ್ನು ಅರಸುವಂತಹ ಪರಿಸ್ಥಿತಿ ಎದುರಾಗಿದೆ’ ಎಂದರು.

ಜೆ.ಹುಚ್ಚಪ್ಪ ಮಾತನಾಡಿ, 'ಭ್ರಷ್ಟಾಚಾರ, ಸರ್ವಾಧಿಕಾರದ ವಿರುದ್ಧ ಜೆ.ಪಿಯವರು ಪ್ರಾರಂಭಿಸಿದ ಆಂದೋಲನದಿಂದ ಅನೇಕ ಸಜ್ಜನರು ರಾಜಕಾರಣಕ್ಕೆ ಬರಲು ಕಾರಣವಾಯಿತು. ಆದರೆ, ಇಂದು ಅಂತಹ ಚಳವಳಿಗಳು ಕಡಿಮೆಯಾಗುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT