ಗಂಗಾವತಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ’ ಎಂದು ಕನಕಗಿರಿ ಶಾಸಕ ಶಿವರಾಜ ತಂಗಡಗಿ ಟೀಕಿಸಿದರು.
ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನದ ಭಾಗವಾಗಿ ಕನಕಗಿರಿ ಬ್ಲಾಕ್ ಪ್ರದೇಶದಲ್ಲಿ ಚಾಲನೆ ನೀಡಿ ಮಾತನಾಡಿದರು.
‘ಕಳೆದ ಮೂರು ವರ್ಷದಲ್ಲಿ ಕೇಂದ್ರದ ಸಾಧನೆ ಶೂನ್ಯ. ಕೇವಲ ಸುಳ್ಳಿನ ಸರಪಣಿಯಲ್ಲಿಯೇ ಮೋದಿ ಅವಧಿ ಮುಗಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿ ಹೀಗೆ ಜನರನ್ನು ಯೇಮಾರಿಸಿ ಮತ ಬೇಟೆಗೆ ಇಳಿಯುತ್ತದೆ. ಅಧಿಕಾರಕ್ಕೆ ಬರುವ ಮುಂಚೆ ಕಪ್ಪು ಹಣ ತಂದು ಪ್ರತಿಯೊಬ್ಬ ನಾಗರಿಕನ ಖಾತೆಗೆ ತಲಾ ₹ 15 ಲಕ್ಷ ಮೊತ್ತದ ಹಣ ಜಮಾ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಯಾರ ಖಾತೆಗೆ ಹಣ ಬಂದಿದೆ ಎಂದು ಪ್ರಶ್ನಿಸಿದ ಶಾಸಕ, ಅಮಿತ್ ಷಾ ಅವರ ಪುತ್ರನ ಖಾತೆಗೆ ಮೋದಿ ಹಣ ಹಾಕಿರಬೇಕು’ ಎಂದು ವ್ಯಂಗ್ಯವಾಡಿದರು.
‘ಸಿದ್ದರಾಮಯ್ಯ ನೇತೃತ್ವದಲ್ಲಿನ ಸರ್ಕಾರ ಬಡವರು ಹಾಗೂ ಜನಪರವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದೆ. ಈಗೀಗ ಬಿಜೆಪಿ ವಿಸ್ತಾರಕರು ಎಂಬ ಸೋಗಿನಲ್ಲಿ ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ಮತದಾರರರು ಅವರನ್ನು ಹಿಡಿದು ಪ್ರಶ್ನಿಸಬೇಕು’ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಉಮೇಶ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಅಮರೇಶ ಗೋನಾಳ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವಂತಗೌಡ ಪಾಟೀಲ್, ಉಪಾಧ್ಯಕ್ಷ ಗವಿಸಿದ್ದಪ್ಪ ಇದ್ದರು.