ನವದೆಹಲಿ: ಭಾರತ ಸೈಕ್ಲಿಂಗ್ ತಂಡವು ಗುರುವಾರ ಇಲ್ಲಿ ಮುಕ್ತಾಯವಾದ ಏಷ್ಯಾ ಕಪ್ ಸೈಕ್ಲಿಂಗ್ ಚಾಂಪಿಯನ್ಷಿಪ್ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.
ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಆತಿಥೇಯ ಸೈಕ್ಲಿಸ್ಟ್ಗಳು ಗಳಿಸಿದರು. ಸ್ಪರ್ಧೆಯ ಕೊನೆಯ ದಿನದಂದು ಭಾರತದ ಸೈಕ್ಲಿಸ್ಟ್ಗಳು ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದರು.
ಚೀನಾ ತಂಡವು ನಾಲ್ಕು ಚಿನ್ನ, ಎರಡು ಬೆಳ್ಳಿ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಇಂಡೋನೆಷ್ಯಾ ತಂಡವು ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗಳಿಸಿ ಮೂರನೇ ಸ್ಥಾನ ಪಡೆಯಿತು.
ಜೂನಿಯರ್ ವಿಭಾಗದಲ್ಲಿ ಮಯೂರ್ ಪವಾರ್ ಮತ್ತು ಜೆ.ಕೆ. ಅಶ್ವಿನ್ ಸ್ಪ್ರಿಂಟ್ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚು ಪಡೆದರು. ಮಯೂರ್ 11.045 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅಶ್ವಿನ್ 11.098 ಸೆಕೆಂಡುಗಳಲ್ಲಿ ಗುರಿ ಸಾಧಿಸಿದರು. ಇಂಡೋನೆಷ್ಯಾದ ಟೆರ್ರಿ ಯುಧಾ ಅವರು ಚಿನ್ನದ ಪದಕ (10.850ಸೆ) ಜಯಿಸಿದರು.
ಮಹಿಳೆಯರ ಎಲೀಟ್ ಸ್ಪ್ರಿಂಟ್ ವಿಭಾಗದಲ್ಲಿ ಪಿ. ನಯನ ರಾಜೇಶ್ ಚಿನ್ನದ ಪದಕ ಗಳಿಸಿದರು. ಚೀನಾದ ಚಾರುಯ್ ಸಂಗ್ ಮತ್ತು ಯುಫಾಂಗ್ ಗು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪಡೆದರು.
ವಿಶ್ವಕಪ್ ಸ್ಪರ್ಧೆಗೆ ದೊಬೊರಾ, ಅಲೀನಾ ಭಾರತದ ದೆಬೊರಾ ಹೆರಾಲ್ಡ್ ಮತ್ತು ಅಲೀನಾ ಅವರು ವಿಶ್ವ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ.
ಇಲ್ಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ವೆಲೊಡ್ರಾಮ್ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟ್ರ್ಯಾಕ್ ಸೈಕ್ಲಿಂಗ್ನ ಮಹಿಳೆಯರ ವಿಭಾಗದಲ್ಲಿ ಇಬ್ಬರೂ ಅರ್ಹತಾ ಮಟ್ಟವನ್ನು ತಲುಪಿದರು. ಅದರೊಂದಿಗೆ ಇಂಗ್ಲೆಂಡ್ನಲ್ಲಿ ನವೆಂಬರ್ 10 ರಿಂದ 12ರವರೆಗೆ ನಡೆಯಲಿರುವ ಯುಸಿಐ ಟ್ರ್ಯಾಕ್ ಸೈಕ್ಲಿಂಗ್ ವಿಶ್ವಕಪ್ ಸ್ಪರ್ಧೆಯಲ್ಲಿ ಭಾಗವಹಿಸುವರು.
ರಾಜುಗೆ ಚಿನ್ನ: ಮೇಘಾಗೆ ಬೆಳ್ಳಿ
ಹುಬ್ಬಳ್ಳಿ: ಕರ್ನಾಟಕದ ರಾಜು ಬಾಟಿ ಮತ್ತು ಮೇಘಾ ಗೂಗಾಡ ಅವರು ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದಿದ್ದಾರೆ.
ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೂರು ಕಿ.ಮೀ. ವೈಯಕ್ತಿಕ ಪರ್ಸೂಟ್ ಸ್ಪರ್ಧೆಯಲ್ಲಿ ರಾಜು ಚಿನ್ನ ಪಡೆದುಕೊಂಡರು. ಭಾರತದ ಮತ್ತೊಮ್ಮೆ ಸ್ಪರ್ಧಿ ಎಂ. ಅನಿಲ್ ಬೆಳ್ಳಿ ಜಯಿಸಿದರು. ರಾಜು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಟಕ್ಕಳಕಿಯವರು.
ಬಾಲಕಿಯರ ಎರಡು ಕಿ.ಮೀ. ವಿಭಾಗದ ಪೈಪೋಟಿಯಲ್ಲಿ ಮೇಘಾ 2 ನಿಮಿಷ 43.711 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು. ಜಮಖಂಡಿ ತಾಲ್ಲೂಕಿನ ಕೊಳ್ಳೊಳ್ಳಿ ಗ್ರಾಮದ ಮೇಘಾ ಇದೇ ವರ್ಷದ ಜುಲೈನಲ್ಲಿ ಬಹಮಾಸ್ನಲ್ಲಿ ನಡೆದಿದ್ದ ಯೂತ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ರಾಜು ಮತ್ತು ಮೇಘಾ ದೆಹಲಿಯಲ್ಲಿರುವ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪುರುಷರ ನಾಲ್ಕು ಕಿ.ಮೀ. ಪರ್ಸೂಟ್ ವಿಭಾಗದಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಜಯಿಸಿತು. ಈ ತಂಡದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಕೃಷ್ಣ ನಾಯ್ಕೋಡಿ ಇದ್ದರು. ಅವರು ಏರ್ಫೋರ್ಸ್ ಪ್ರತಿನಿಧಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.