ಉಜಿರೆ: ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ 1968ರ ಅಕ್ಟೋಬರ್ 24 ರಂದು ಸಂಪ್ರದಾಯದಂತೆ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಧಂತ್ಯುತ್ಸವ ಇದೇ 24ರಂದು ನಡೆಯಲಿದೆ.
ಧರ್ಮಸ್ಥಳದ ಸಿಬ್ಬಂದಿ, ಊರಿನ ನಾಗರಿಕರು ಹಾಗೂ ಭಕ್ತಾಭಿಮಾನಿಗಳು ಸರಳ ರೀತಿಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಭರದಿಂದ ಸಿದ್ದತೆಗಳು ನಡೆಯುತ್ತಿವೆ.
24ರಂದು ಸಂಜೆ 5.30ಕ್ಕೆ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮೈಸೂರು ಅರಮನೆಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು. ಶಿಕ್ಷಣ ತಜ್ಞ, ಸಾಹಿತಿ ಡಾ.ಗುರುರಾಜ ಕರ್ಜಗಿ ಅಭಿನಂದನಾ ಭಾಷಣ ಮಾಡುವರು.
ಹೆಗ್ಗಳಿಕೆ: ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಅತಿ ದೀರ್ಘಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಇವರದು.