ನವದೆಹಲಿ: ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ ಶಿರಡಿ ವಿಮಾನ ನಿಲ್ದಾಣಕ್ಕೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್ಎಫ್) ನಿಯೋಜಿಸುವ ಸಾಧ್ಯತೆ ಇದೆ.
ಈಚೆಗೆ ಉದ್ಘಾಟನೆಗೊಂಡಿರುವ ವಿಮಾನ ನಿಲ್ದಾಣದ ಸನಿಹದಲ್ಲಿಯೇ ಶಿರಡಿ ಸಾಯಿಬಾಬಾ ದೇವಸ್ಥಾನವೂ ಇದೆ. ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಭದ್ರತಾ ಪಡೆಯನ್ನು ನಿಯೋಜಿಸಲು ಚರ್ಚೆ ನಡೆದಿದೆ.
ಭದ್ರತೆ ಕಲ್ಪಿಸುವಂತೆ ಮನವಿ ಬಂದಿದ್ದು, ಭದ್ರತಾ ಪಡೆಗಳ ನಿಯೋಜನೆ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಸಿಐಎಸ್ಎಫ್ನ ಪ್ರಧಾನ ಮಹಾನಿರ್ದೇಶಕ ಓ.ಪಿ ಸಿಂಗ್ ತಿಳಿಸಿದ್ದಾರೆ.
ಸದ್ಯ ದೇಶದಲ್ಲಿರುವ 59 ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾಪಡೆಯನ್ನು ನಿಯೋಜಿಸಲಾಗಿದೆ.