ನವದೆಹಲಿ: ದೆಹಲಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿ 15 ವಿದ್ಯಾರ್ಥಿಗಳ ವಿರುದ್ಧ ವಿ.ವಿ ತೆಗೆದುಕೊಂಡಿದ್ದ ಶಿಸ್ತು ಕ್ರಮವನ್ನು ದೆಹಲಿ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಜೆಎನ್ಯು ಆವರಣದಲ್ಲಿ ಕಳೆದ ವರ್ಷದ ಫೆಬ್ರುವರಿ 9ರಂದು ಆಯೋಜಿಸಿದ್ದ ವಿವಾದಾತ್ಮಕ ಕಾರ್ಯಕ್ರಮ ಸಂಬಂಧ ವಿ.ವಿವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವಿದ್ಯಾರ್ಥಿಗಳು ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪಗಳ ಬಗ್ಗೆ ವಾದ ಮಂಡಿಸಲು ತಮಗೆ ಅವಕಾಶ ನೀಡಿರಲಿಲ್ಲ ಎಂದು ದೂರು ನೀಡಿದ್ದರು.
ವಿದ್ಯಾರ್ಥಿಗಳ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಹೊಸದಾಗಿ ವಿಚಾರಣೆ ನಡೆಸಲು ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ. ವಿಚಾರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅವರ ವಾದ ಮಂಡಿಸಲು ಅವಕಾಶ ನೀಡುವಂತೆ ತಾಕೀತು ಮಾಡಿದೆ.
ವಿದ್ಯಾರ್ಥಿಗಳ ವಾದ ಆಲಿಸಿದ ಬಳಿಕ ಆರು ವಾರಗಳ ಒಳಗಾಗಿ ಜೆಎನ್ಯುನ ಮೇಲ್ಮನವಿ ಪ್ರಾಧಿಕಾರ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಶಿಸ್ತು ಕ್ರಮಗಳ ಭಾಗವಾಗಿ ಕೆಲವು ವಿದ್ಯಾರ್ಥಿಗಳನ್ನು ಹಲವು ಸೆಮಿಸ್ಟರ್ಗಳವರೆಗೆ ಅಮಾನತು ಮಾಡುವುದರ ಜೊತೆಗೆ ಇನ್ನೂ ಕೆಲವರ ಹಾಸ್ಟೆಲ್ ಸೌಲಭ್ಯಗಳಿಗೆ ಕತ್ತರಿ ಹಾಕಲಾಗಿತ್ತು.