ಬಳ್ಳಾರಿ: ತಾಲ್ಲೂಕಿನ ಚಿತ್ತಗುಂಟ ಗ್ರಾಮದ ಹಳ್ಳದಲ್ಲಿ ಗುರುವಾರ ಮುಳುಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಅಗ್ನಿಶಾಮಕ ದಳ ಮತ್ತು ಪಿ.ಡಿ ಹಳ್ಳಿ ಠಾಣೆಯ ಪೊಲೀಸರು ಗ್ರಾಮಸ್ಥರ ನೆರವಿನಿಂದ ಮೇಲೆತ್ತಿ, ಎಪ್ಪತ್ತು ಪ್ರಯಾಣಿಕರನ್ನು ರಕ್ಷಿಸಿದರು.
ಕೊಪ್ಪಳದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ ಮಧ್ಯಾಹ್ನ ಹಳ್ಳದ ಬಳಿ ಬಂದಾಗ ನೀರು ರಭಸವಾಗಿ ಹರಿಯುತ್ತಿತ್ತು. ಚಾಲಕ ಮುಂಜಾಗ್ರತೆ ವಹಿಸದೇ ಬಸ್ ಓಡಿಸಿದ್ದರ ಪರಿಣಾಮವಾಗಿ ಅದು ಹಳ್ಳದಲ್ಲೇ ಸಿಲುಕಿ ಅರ್ಧಭಾಗದಷ್ಟು ಮುಳುಗಿತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದೆವು. ಮೊದಲು ಪ್ರಯಾಣಿಕರನ್ನು ಬಸ್ನಿಂದ ಹೊರಕ್ಕೆ ಕರೆತಂದು ಹಳ್ಳದಾಚೆಗೆ ಬಿಟ್ಟೆವು. ನಂತರ ಬಸ್ ಅನ್ನು ಹೊರಕ್ಕೆ ತಂದೆವು’ ಎಂದು ಪೊಲೀಸರು ತಿಳಿಸಿದರು.