ಬಾಗೇಪಲ್ಲಿ: 'ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಲಕುಂಟೆ ಕೆರೆ ಪ್ರದೇಶವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಕೋಡಿ ಕಿತ್ತು ಹಾಕಿದ್ದಾರೆ, ಸದ್ಯ ಕೆರೆಯಲ್ಲಿ ಸಂಗ್ರಹವಾಗಬೇಕಾದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ' ಎಂದು ರೈತರು ಆರೋಪಿಸುತ್ತಿದ್ದಾರೆ.
‘ಸುಮಾರು 15-20 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಬಂಗಲ ಕುಂಟೆ ಕೆರೆಯ ಬಹುತೇಕ ಪ್ರದೇಶ ಒತ್ತುವರಿಗೆ ಒಳಗಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದರೂ ಒತ್ತುವರಿ ತೆರವುಗೊಳಿಸುವ ಕೆಲಸ ನಡೆದಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬರಿದಾದ ಕೆರೆಯಲ್ಲಿ ಈವರೆಗೆ ಒತ್ತುವರಿ ಅಷ್ಟಾಗಿ ಕಂಡುಬರುತ್ತಿರಲಿಲ್ಲ. ಇದೀಗ ಕೆರೆಗೆ ನೀರು ಬಂದಿರುವ ಕಾರಣಕ್ಕೆ ಖಾಸಗಿ ವ್ಯಕ್ತಿಗಳು ಮಾಡಿಕೊಂಡಿರುವ ಅತಿಕ್ರಮಣ ಸುಲಭವಾಗಿ ಗೋಚರಿಸುವಂತಾಗಿದೆ. ಈಗಾಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.