ಕಡೂರು: ತಾಲ್ಲೂಕಿನ ಸೂರಾಪುರ ಗ್ರಾಮದ ಕೆರೆಯಲ್ಲಿ ಸಾಗುವಳಿ ಮಾಡುತ್ತಿದ್ದುದನ್ನು ಕಡೂರು ತಹಶೀಲ್ದಾರ್ ಅವರು ಖುಲ್ಲಾಗೊಳಿಸಿ ಗುರುವಾರ ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರಿಸಿದ್ದಾರೆ.
ಸೂರಾಪುರ ಗ್ರಾಮದಲ್ಲಿರುವ ಕಡೂರು-ಮರವಂಜಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸರ್ವೆ ನಂಬರ್ 51 ರಲ್ಲಿರುವ 15 ಎಕರೆ ವಿಸ್ತೀರ್ಣದ ಕೆರೆಯಲ್ಲಿ 20 ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿತ್ತು. 6ರಿಂದ 7ಮಂದಿ 11.20 ಎಕರೆ ಜಮೀನನ್ನು ಸಾಗುವಳಿ ಮಾಡಿದ್ದರು. ಇಲ್ಲಿ ತೆಂಗು, ಅಡಿಕೆ ಬೆಳೆಯಲಾಗಿತ್ತು. ಆದರೆ 3 ವರ್ಷಗಳಿಂದ ಮಳೆಯಾಗದೆ ಈ ಗಿಡಗಳು ನಾಶವಾಗಿದ್ದವು.
ಈ ಕೆರೆಯನ್ನು ಕೆರೆಯನ್ನಾಗಿಯೇ ಉಳಿಸಿಕೊಳ್ಳಬೇಕೆಂಬ ಆಶಯದಿಂದ ಹಲವು ಮಂದಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ತರೀಕೆರೆ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದರು.
ಈ ವರದಿಯನ್ವಯ ಕೆರೆಯನ್ನು ಖುಲ್ಲಗೊಳಿಸಲು ಜಿಲ್ಲಾಧಿಕಾರಿಗಳು ನೀಡಿದ ಅದೇಶದನ್ವಯ ಕಡೂರು ತಹಶೀಲ್ದಾರ್ ಎಂ.ಭಾಗ್ಯ ಅವರು ಗ್ರಾಮಕ್ಕೆ ಭೇಟಿ ನೀಡಿ, ಸದರಿ ಕೆರೆಯನ್ನು ಖುಲ್ಲಾಗೊಳಿಸಿ ಅದನ್ನು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಸುಪರ್ದಿಗೆ ಹಸ್ತಾಂತರಿಸಿದ್ದಾರೆ.
ಕಡೂರು ಪಿಎಸ್ಐ ರಾಕೇಶ್, ಕಂದಾಯಾಧಿಕಾರಿ ಕಲ್ಮರುಡಪ್ಪ, ಗ್ರಾಮಲೆಕ್ಕಿಗರಾದ ಮಧುಸೂಧನ್, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಷಡಕ್ಷರಪ್ಪ, ಸರ್ವೆ ಅಧಿಕಾರಿಗಳಾದ ಉಮೇಶ್, ಹಾಲಪ್ಪ, ಶಿರಸ್ತೇದಾರ್ ಶಿವಮೂರ್ತಿ ಇದ್ದರು.