ಹರಪನಹಳ್ಳಿ: ಬಗರಹುಕುಂ ಸಾಗುವಳಿ ರೈತರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮುಖಂಡ ರಾಜಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಬಗರ್ಹುಕುಂ ಸಾಗುವಳಿದಾರರು ಇದ್ದಾರೆ. ಅವರ ಪೈಕಿ 2,300 ಅರ್ಜಿದಾರರ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದು ಉಳಿದ ಅರ್ಜಿಗಳನ್ನು ನಾನಾ ಕಾರಣಗಳನ್ನು ನೀಡಿ ತಿರಸ್ಕರಿಸಿದ್ದಾರೆ.
1998ರಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸರ್ಕಾರ ಹಕ್ಕು ಪತ್ರ ವಿತರಿಸಲು ಮಾನದಂಡ ರೂಪಿಸಿದೆ. ಆದರೆ, ಅದಕ್ಕೂ ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಪರಿಗಣಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ರೈತರಿಗೆ ಹೊಸದಾಗಿ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಿ ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಇದೇವೇಳೆ, ತಹಶೀಲ್ದಾರ್ ಕೆ.ಗುರುಬಸವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಬುತ್ತಿ ತಂದಿದ್ದ ರೈತ ಮಹಿಳೆಯರು ಊಟ ಮಾಡಿದರು. ಮುಖಂಡ ಕುದರಿ ನಾಗರಾಜ್ ಅವರೂ ಭಾಗವಹಿಸಿದ್ದರು.