ಹರಪನಹಳ್ಳಿ: ಈಚೆಗೆ ಸುರಿದ ಉತ್ತಮ ಮಳೆಗೆ ತಾಲ್ಲೂಕಿನ ಯು.ಕಲ್ಲಹಳ್ಳಿ ಗ್ರಾಮದ ಕೆರೆಯು ಭರ್ತಿಯಾಗಿದೆ. ಇದರಿಂದ ಅಂತರ್ಜಲ ಹೆಚ್ಚಿದ್ದು, ಸುತ್ತಮುತ್ತಲಿನ ಕೊಳವೆಬಾವಿಗಳು ಮರು ಪೂರ್ಣಗೊಂಡಿವೆ. ಇದರಿಂದ ಕುಡಿಯುವ ನೀರಿನ ಬರ ನೀಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳಿಂದ ಬರಕ್ಕೆ ತುತ್ತಾಗಿದ್ದ ಈ ಗ್ರಾಮವು ಸಂಪೂರ್ಣವಾಗಿ ಒಣಗಿಹೋಗಿತ್ತು. ಕೊಳವೆ ಬಾವಿಗಳು ಒಣಗಿ ರೈತರು ಬೆಳೆ ಇಲ್ಲದೆ ಕೂಲಿ ಅರಸಿ ವಲಸೆ ಹೋಗಿದ್ದರು. ಕುಡಿಯುವ ನೀರಿನ ಕೊರತೆ ತೀವ್ರಗೊಂಡು ಟ್ಯಾಂಕರ್ ಮೂಲಕ ನೀರನ್ನು ಖರೀದಿಸುತ್ತಿದ್ದರು.
ಕೆರೆ ಭರ್ತಿಯಾದರೆ ಈ ಭಾಗದ ರೈತರು ಪ್ರತಿ ವರ್ಷ 80 ಎಕರೆ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಾದ
ಚಟ್ನಹಳ್ಳಿ, ಉಚ್ಚಂಗಿದುರ್ಗ, ಕುರೆಮಾಗನಹಳ್ಳಿ, ಕೆಂಚಾಪುರ, ರಾಮನಗರ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಭದ್ರಾ ನೀರು ಅಗತ್ಯ: ಪ್ರತಿ ವರ್ಷ ಬರದಿಂದ ತತ್ತರಿಸುವ ಈ ಗ್ರಾಮಗಳಿಗೆ ಶಾಶ್ವತ ಪರಿಹಾರ ಯೋಜನೆ ಅಗತ್ಯವಿದೆ. ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ
22 ಕೆರೆಗಳಿಗೆ ನೀರು ಹರಿಸುವ ಕೊಳವೆಗಳು ಅತ್ಯಂತ ಸಮೀಪದಲ್ಲಿ ಹಾದು ಹೋಗಲಿವೆ. ಆದ್ದರಿಂದ ಯು.ಕಲ್ಲಹಳ್ಳಿ ಕೆರೆಯನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು.
ಪ್ರವಾಸಿ ಕೇಂದ್ರವಾಗಿರುವ ಉಚ್ಚಂಗಿದುರ್ಗ ಗ್ರಾಮಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ ಪಂಪನಗೌಡ ಹೇಳುತ್ತಾರೆ. ಕೆರೆಯ ನೀರನ್ನು ಪೋಲು ಮಾಡದೇ ಮಿತವಾಗಿ ಬಳಸುವುದು ಅಗತ್ಯ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿದೆ. ಕೆರೆಗೆಬಂದಿರುವ ನೀರು ಕನಿಷ್ಠ
ಎರಡು ವರ್ಷಗಳಿಗೆ ಉಳಿಯಲಿದೆ ಎಂಬುದು ಅವರ ಅನಿಸಿಕೆ.
ದಾವಣಗೆರೆಯ ಕುಂದವಾಡ ಕೆರೆ ಮಾದರಿಯಲ್ಲಿ ಯು.ಕಲ್ಲಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಉಚ್ಚಂಗಿದುರ್ಗಕ್ಕೆ ಬರುವ ಪ್ರವಾಸಿಗರಿಗೆ ಕೆರೆಯು ಪ್ರವಾಸಿ ತಾಣವಾಗಲಿದೆ ಎಂದು ಗ್ರಾಮದ ಯುವಕರಾದ ಮಹೇಶ್, ಸುರೇಶ್, ಬಾಬಣ್ಣ, ಭೈರೇಗೌಡ, ಫಣಿಯಾಪುರ ಲಿಂಗರಾಜ್, ಎ.ಕೆ.ಪರಸಪ್ಪ ಒತ್ತಾಯಿಸುತ್ತಾರೆ.