ಮಂಡ್ಯ: ‘ಜೆಡಿಎಸ್ ಮೇಲೆ ಕಾರ್ಯಕರ್ತರು ಹಾಗೂ ಮುಖಂಡರು ನಿಷ್ಠೆ ತೋರವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಜೆಡಿಎಸ್ ಮುಖಂಡ ಜಫ್ರುಲ್ಲಾಖಾನ್ ಹೇಳಿದರು. ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಗುರುವಾರ ನಡೆದ ಎಚ್ಡಿಕೆ ಜನಪರ ವೇದಿಕೆ ರಚನೆ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯದಲ್ಲಿ ಕೈಗೊಂಡ ಕಾರ್ಯಗಳು ಮಾದರಿ ಆಗಿವೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸಾಗಬೇಕು. ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಆಗಿದೆ.
ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಹಲವರಿದ್ದಾರೆ. ಸಮರ್ಥ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ವರಿಷ್ಠರು ಹಾಗೂ ಕೋರ್ ಕಮಿಟಿ ನಿರ್ಧರಿಸುತ್ತದೆ. ಆ ನಿರ್ಧಾರವನ್ನು ಒಪ್ಪಿಕೊಂಡು ಪಕ್ಷಕ್ಕೆ ನಿಷ್ಠೆ ತೋರಬೇಕು’ ಎಂದು ಹೇಳಿದರು.
ಸಂಸದ ಸಿ.ಎಸ್.ಪುಟ್ಟರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಶಿವಣ್ಣ, ಎಚ್.ಎನ್.ಯೋಗೇಶ್, ಮುಖಂಡರಾದ ಕೆ.ಎಸ್.ವಿಜಯಾನಂದ, ಡಿ.ರಮೇಶ್, ಪ್ರಭಾವತಿ ಜಯರಾಂ ಇದ್ದರು.