ವರುಣಾ: ‘ಆಧುನಿಕತೆ ಬೆಳೆದಂತೆ ರೈತರು ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿ ಮಾಡಬೇಕು’ ಎಂದು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಹೇಳಿದರು. ಸಿದ್ದರಾಮನಹುಂಡಿಯಲ್ಲಿ ಗುರುವಾರ ಆಯೋಜಿಸಿದ್ದ ‘ದುಡಿಯುವ ಕೈಗಳ ಬಲವರ್ಧನೆಗೆ ಕೃಷಿ ತಾಂತ್ರಿಕ ಸೊಬಗು’ ಎಂಬ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಬಳಿಯ ಪಿ.ಜಿ. ಹುಂಡಿಯಲ್ಲಿರುವ ಯಂತ್ರಮನೆಯ ಯಂತ್ರಗಳನ್ನು ಬಳಸಿ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಿ ಎಂದು ಸಲಹೆ ನೀಡಿದರು. ನಂತರ ಸುತ್ತೂರು ಕೃಷಿ ವಿಜ್ಞಾನಿ ಡಾ.ಶಾಮರಾಜ್ ಮಾತನಾಡಿ, ಯಂತ್ರಗಳ ಹಾಗೂ ಮಾನವ ಶಕ್ತಿಯ ಬಳಕೆ ಮಾಡಿದಾಗ ಅದರಲ್ಲಿ ಯಾವುದು ಲಾಭ ಅಥವ ನಷ್ಟ ಉಂಟುಮಾಡುತ್ತದೆ ಎಂಬುದರ ಅರಿವು ಮೂಡಿಸಿಕೊಂಡು ಕೃಷಿ ಚಟುವಟಿಕೆಯನ್ನು ನಡೆಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಲಾಯಿತು. ಪ್ರಗತಿಪರ ರೈತರು ಯಂತ್ರಗಳ ಬಳಕೆಯಿಂದ ಉತ್ತಮ ಲಾಭ ಮಾಡಬಹುದು ಎಂದು ಪಿ.ಜಿ.ಹುಂಡಿ ರೈತ ನಾಗರಾಜ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ವೈ. ಭಾಗ್ಯಾ, ತಾ.ಪಂ.ಸದಸ್ಯೆ ಅಂಜಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ. ಕೆ.ಎಪಿಎಂಸಿ ಸದಸ್ಯ ಬಸವರಾಜು, ಶ್ರೀಹರಿ, ಪಿಆರ್ ಒ ವಿಜಯಕುಮಾರ್, ಗ್ರಾಮದ ಮುಖಂಡರು ಹಾಗೂ ಆರುನೂರಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.