ರಾಮನಗರ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಬಿಸಿಯೂಟ ಯೋಜನೆ ಅಕ್ಕಿಯನ್ನು ಶುಕ್ರವಾರ ಬೆಳಿಗ್ಗೆ ಸಾರ್ವಜನಿಕರೇ ಪತ್ತೆ ಮಾಡಿದ್ದಾರೆ.
ಸುಮಾರು ಹತ್ತು ಮೂಟೆಗಳಲ್ಲಿ ಅಕ್ಕಿಯನ್ನು ತುಂಬಿ ಎರಡು ಆಟೊಗಳಲ್ಲಿ ಟಿಪ್ಪು ನಗರದ ಅಂಗಡಿ ಒಂದಕ್ಕೆ ಸಾಗಿಸಲಾಗುತಿತ್ತು. ರೈಲು ನಿಲ್ದಾಣದ ಕೆಳ ಸೇತುವೆಯ ಬಳಿ ಈ ಆಟೊಗಳು ತೆರಳುತ್ತಿದ್ದ ಸಂದರ್ಭ ಸಾರ್ವಜನಿಕರು ಅನುಮಾನಗೊಂಡು ವಿಚಾರಿಸಿದ್ದಾರೆ. ಆಟೋ ಚಾಲಕರು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿ ಅಕ್ಕಿಯನ್ನು ಮರಳಿ ನಗರದ ಕುಮದಾನ್ ಮೊಹಲ್ಲಾದಲ್ಲಿನ ಯಂಗ್ ಶಿಕ್ಷಣ ಸೊಸೈಟಿಯ ರೆಹಮಾನಿಯಾ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಈ ಶಾಲೆಯಿಂದಲೇ ಬಿಸಿಯೂಟದ ಅಕ್ಕಿಯನ್ನು ಸಾಗಿಸಿರಬಹುದು ಎಂದು ಶಂಕಿಸಲಾಗಿದೆ.
ಕಾಲ್ಕಿತ್ತ ಶಿಕ್ಷಕರು: ವಿಚಾರ ತಿಳಿದು ಮಾಧ್ಯಮ ಪ್ರತಿನಿಧಿಗಳು ಶಾಲೆಗೆ ತೆರಳಿದ ಸಂದರ್ಭ ಪತ್ರಕರ್ತರ ಎದುರೇ ಶಿಕ್ಷಕರು ಅಲ್ಲಿಂದ ಕಾಲ್ಕಿತ್ತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ರಾಮನಗರ ಡಿಡಿಪಿಯು ಗಂಗಮಾರೇಗೌಡ ಪ್ರತಿಕ್ರಿಯಿಸಿ, ಘಟನೆ ಕುರಿತು ವರದಿ ಪಡೆಯುವುದಾಗಿ ತಿಳಿಸಿದರು.