ಗುರುಮಠಕಲ್: ಚಿಂತನಹಳ್ಳಿ ಗ್ರಾಮದ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ಪುಟ್ಟ ಕೋಣೆಯಲ್ಲಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಲೋಕಕಲ್ಯಾಣಕ್ಕಾಗಿ 11 ದಿನಗಳಿಂದ ಆಹಾರ ತ್ಯಜಿಸಿ ಕೈಗೊಂಡಿದ್ದ ಸಮಾಧಿಯೋಗ ಮೌನಾನುಷ್ಟಾನವನ್ನು ಬುಧವಾರ ಅಂತ್ಯಗೊಳಿಸಿದರು.
ಗಾಳಿ, ಬೆಳಕು, ನೀರು ಇಲ್ಲದೇ ಸಂಪೂರ್ಣ ವಾಗಿ ಮುಚ್ಚಲಾಗಿದ್ದ ಸಣ್ಣದಾದ ಸಮಾಧಿ ಮಾದರಿಯ ಕೋಣೆಯಲ್ಲಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ತಪಸ್ಸು ಕೈಗೊಂಡು ನಂತರ ಸಮಾಧಿ ಯೋಗ ನಡೆಸಿದರು. ಅವರನ್ನು ವಾರಣಾಸಿ ಹಿರೇಮಠದ ಕೊಟ್ಟೂರೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಹೊರಗೆ ಕರೆತರಲಾಯಿತು.
ಹಿನ್ನೆಲೆ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಚೋಟೇಶ್ವರ ಶ್ರೀಗಳು ಗದಗ ಜಿಲ್ಲೆಯ ಅಂತುರ–ಬೆಂತುರ ಮಠದ ಪೀಠಾಧಿಪತಿ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಸಂಸ್ಕತ ವಿಭಾಗದಲ್ಲಿ ‘ಕನಸುಗಳು, ಯೋಗ ಮತ್ತು ಸಮಾಧಿ’ ಕುರಿತು ಸಂಶೋಧನೆ ಮಾಡಿದ್ದಾರೆ. ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರದ ಗೌರವ ಉಪನ್ಯಾಸಕರಾಗಿದ್ದಾರೆ.
‘ರೈತರ ಸಮಸ್ಯೆಗಳು ಕೊನೆಗಾಣಬೇಕು. ಉತ್ತಮ ಬೆಳೆಯಿಂದ ಅನ್ನದಾತರು ನೆಮ್ಮದಿಯಿಂದ ಬಾಳಬೇಕು. ಸಕಲ ಜೀವಿಗಳಿಗೆ ಸುಖಜೀವನ ದೊರೆಯಲಿ ಎಂಬ ಉದ್ದೇಶದಿಂದ ಸ್ವಾಮೀಜಿ ಮೌನಾನುಷ್ಠಾನ ಕೈಗೊಂಡರು’ ಎಂದು ಭಕ್ತ ಜಲಾಲಪ್ಪ ತಿಳಿಸಿದರು.
ಗವಿಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮೀಜಿಯವರು ಎರಡನೇ ಬಾರಿ ಮೌನಾನುಷ್ಟಾನ ಕೈಗೊಂಡಿದ್ದು, ಇದು ಅವರ 44ನೇ ಮೌನಾನುಷ್ಟಾನ ಎಂದು ಸ್ವಾಮೀಜಿ ಸಹಾಯಕ ಗವಿಸಿದ್ದಲಿಂಗಯ್ಯ ತಿಳಿಸಿದರು.