ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ದೇಶಿ ಆಕಾಶಬುಟ್ಟಿ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೀಪಾವಳಿ ಸಂದರ್ಭದಲ್ಲಿ ಆಕಾಶಬುಟ್ಟಿಗಳನ್ನು ಮನೆ ಎದುರು ತೂಗು ಹಾಕುತ್ತಾರೆ. ಈ ಬುಟ್ಟಿಗಳು ಶುಭ, ಅದೃಷ್ಟ ಸೂಚಕವೂ ಹೌದು. ಕರಾವಳಿ ಭಾಗದಲ್ಲಿ ಇವುಗಳನ್ನು ಗೂಡು ದೀಪ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಆಕಾಶ ಬುಟ್ಟಿ ಎಂದು ಕರೆಯುತ್ತಾರೆ.

ಹಿಂದೆಲ್ಲಾ ಬಿದಿರು ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳನ್ನು ಮನೆಯೆದುರು ಕಾಣುತ್ತಿದ್ದೇವು. ಆದರೆ ಕಳೆದ 10 ವರ್ಷಗಳಿಂದ ಚೀನಿ ಆಕಾಶಬುಟ್ಟಿಗಳೇ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ದೇಶಿ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ನಗರದ ಸಮರ್ಪಣ ಸಮಾಜ ಸ್ಪಂದನ ಸಂಘ ದೀಪಾವಳಿಗೆ ದೇಶಿ ಆಕಾಶಬುಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಮನೆ ಮುಂದೆ ಬಿದಿರಿನ ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳು ದುಷ್ಟ ಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆದರೆ, ಅದರೊಳಗೆ ಹಚ್ಚಿರುವ ಹಣತೆಯು ಐಶ್ವರ್ಯದ ಲಕ್ಷ್ಮೀಯನ್ನು ಮನೆಯೊಳಗೆ ಸ್ವಾಗತಿಸುತ್ತದೆ ಎಂದು ಪ್ರತೀಕವಿದೆ. ನಾಲ್ಕು ವರ್ಷಗಳಿಂದ ಬಿದಿರಿನ ಕೆಲಸ ಮಾಡುವ ಮೇದರ ಜನಾಂಗದಿಂದ ಬಿದಿರಿನ ಕಡ್ಡಿಗಳು ಹಾಗೂ ದೇಶಿ ಬಟ್ಟೆಯಿಂದ ಆಕಾಶ ಬುಟ್ಟಿಯನ್ನು ತಯಾರಿಸಿ ಸಮರ್ಪಣ ಸಮಾಜ ಸ್ಪಂದನ ಸಂಘ ಮಾರಾಟ ಮಾಡುತ್ತಿದೆ. ಈ ವರ್ಷ ಈ ಆಕಾಶಬುಟ್ಟಿಗಳಿಗೆ ‘ಆಯೋಜಕ’ ಎಂಬ ಹೆಸರು ಇಡಲಾಗಿದೆ.

ಆಕಾಶ ಬುಟ್ಟಿಗಳಿಗೆ ಬೇಕಾದ ಗೋಂದು, ದಾರವನ್ನು ಸಮರ್ಪಣ ಸಮಾಜದ ಮಹಿಳೆಯರು ಮಾಡುತ್ತಾರೆ. ಬುಟ್ಟಿಗೆ ಸುತ್ತಲು ಬೇಕಾದ ತೆಳುಬಟ್ಟೆಯನ್ನು ಸೂರತ್‌ನಿಂದ ತರಿಸಿಕೊಂಡಿದ್ದಾರೆ. ಈ ಆಕಾಶಬುಟ್ಟಿಗಳನ್ನು ಸುಮನಹಳ್ಳಿಯ ಮನಃ ಪರಿವರ್ತನಾ ಕೇಂದ್ರದ ಬಾಲಕರು ತಯಾರಿಸಿದ್ದಾರೆ. ಬಿದಿರಿನ ಕಡ್ಡಿಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಬಾಲಕರಿಗೆ ಸಮರ್ಪಣಾ ಸಂಸ್ಥೆಯ ಸದಸ್ಯರೊಬ್ಬರು ಹೇಳಿಕೊಡುತ್ತಾರೆ. ಪ್ರತಿದಿನ 50–60 ಆಕಾಶಬುಟ್ಟಿ ತಯಾರಾಗುತ್ತದೆ. ಒಂದು ಆಕಾಶ ಬುಟ್ಟಿಗೆ ₹300.

‘ಈ ಬಾರಿ ಚನ್ನರಾಯಪಟ್ಟಣ ಮರದ ಕಡ್ಡಿಗಳಿಂದಲೂ ಆಕಾಶ ಬುಟ್ಟಿ ತಯಾರಿಸಲಾಗಿದೆ. ಒಂದು ಆಕಾಶ ಬುಟ್ಟಿಯಲ್ಲಿ ದುಡ್ಡಿನಲ್ಲಿ ಆಕಾಶಬುಟ್ಟಿ  ಮಾಡಿದ ವ್ಯಕ್ತಿಗೆ ₹30, ಕರ್ನಾಟಕ ಯೋಧರ ಕಲ್ಯಾಣ ನಿಧಿಗೆ ₹30, ಗೋಂದು, ದಾರ ಸಿದ್ದಪಡಿಸಿದ  ಮಹಿಳೆಯರಿಗೆ ₹20, ಪ್ಯಾಕಿಂಗ್‌, ವಿತರಣೆ ಹೊರತುಪಡಿಸಿ ಉಳಿದ ಹಣ ಸಮರ್ಪಣ ಸಂಸ್ಥೆಗೆ ಸೇರುತ್ತದೆ’ ಎನ್ನುತ್ತಾರೆ ಸಮರ್ಪಣ ಸಮಾಜ ಸ್ಪಂದನ ಸಂಘದ ಸ್ಥಾಪಕರಾದ ಶಿವಕುಮಾರ ಹೊಸಮನಿ.

₹150 ಬೆಲೆಯ ಆಕಾಶಬುಟ್ಟಿಯೂ ಇಲ್ಲಿ ಲಭ್ಯ. ಆಕಾಶಬುಟ್ಟಿಯ ಜೊತೆಗೆ ಎರಡೆರಡು ಹಣತೆಗಳನ್ನು ಉಚಿತವಾಗಿ ಸಮರ್ಪಣ ಸಂಸ್ಥೆ ನೀಡುತ್ತದೆ. ಕಳೆದ ಗಣಪತಿ ಹಬ್ಬಕ್ಕೆ ಸಮರ್ಪಣ ಸಂಸ್ಥೆ ಕರೆಯ ಅಂಚಿನ ಫಲವತ್ತಾದ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿ ಮಾರಿದ್ದರು. ಈ ಗಣೇಶನ ಮೂರ್ತಿಗಳನ್ನು ಮನೆಗಳಲ್ಲಿ ವಿಸರ್ಜಿಸಲು  ಸಾಧ್ಯವಾಗದಿದ್ದರೆ ಆ ಮಣ್ಣನ್ನು ವಾಪಸ್‌ ತಂದುಕೊಡುವಂತೆ ಸಂಸ್ಥೆ ಗ್ರಾಹಕರಿಗೆ ಮನವಿ ಮಾಡಿತ್ತು. ‘ಸುಮಾರು 800 ಮೂರ್ತಿಗಳ ಮಣ್ಣು  ವಾಪಸ್‌ ಬಂದಿತ್ತು. ಆ ಮಣ್ಣಿನಿಂದ  ಹಣತೆ ಮಾಡಲಾಗಿದೆ. ಸುಮಾರು 10 ಸಾವಿರ ಹಣತೆಗಳನ್ನು ಮಾಡಲಾಗಿದೆ’ ಎಂದು ಶಿವಕುಮಾರ್‌ ಹೇಳುತ್ತಾರೆ.

‘ಈ ಆಕಾಶಬುಟ್ಟಿಯಲ್ಲಿ ಕೆಳಗೆ ಹಣತೆ ಇಡಬಹುದು. ಕೆಲ ಆಕಾಶ ಬುಟ್ಟಿಗೆ ಮೇಲಿನಿಂದ ವಿದ್ಯುತ್‌ ಬಲ್ಬ್‌ ಜೋಡಿಸಬಹುದು. ಆದರೆ ಹಣತೆ ಹಾಗೂ ವಿದ್ಯುತ್‌ ಬಲ್ಬ್‌ ಎರಡೂ ಇಡಬಾರದು. ಒಡೆದು ಹೋಗುವ ಅಪಾಯವಿರುತ್ತದೆ’ ಎಂದು ಶಿವಕುಮಾರ್‌ ಎಚ್ಚರಿಕೆ ನೀಡುತ್ತಾರೆ. ಈ ಆಕಾಶ ಬುಟ್ಟಿಗಳನ್ನು ಮಂಗಳೂರು, ಗದಗ, ರಾಯಚೂರು, ಹುಬ್ಬಳ್ಳಿ ಹಾಗೂ ರಾಜ್ಯದಾದ್ಯಂತ ಮಾರಾಟ ಮಾಡಲಾಗುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ನಗರದ ಕೆಲ ಶಾಲೆಗಳಿಗೆ ಹೋಗಿ ಪಟಾಕಿ ದುರಂತ ಹಾಗು ಪರಿಸರ ಮಾಲಿನ್ಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಸಮರ್ಪಣ ಸಂಸ್ಥೆ ಮಾಡುತ್ತದೆ.

ಆಕಾಶ ಬುಟ್ಟಿ ಬೇಕಾದವರು ಶಿವಕುಮಾರ್‌ ಅವರ 9980008074 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿದರೆ ಅವರು ಆಕಾಶಬುಟ್ಟಿ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT