ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಾಚಾರದ ‘ಕಟಕ’ ಪ್ರಯೋಗ

Last Updated 13 ಅಕ್ಟೋಬರ್ 2017, 16:25 IST
ಅಕ್ಷರ ಗಾತ್ರ

ಚಿತ್ರ: ಕಟಕ
ನಿರ್ಮಾಪಕ: ಎನ್‌.ಎಸ್‌. ರಾಜಕುಮಾರ್
ನಿರ್ದೇಶಕ: ರವಿ ಬಸ್ರೂರ್
ತಾರಾಗಣ: ಅಶೋಕ್‌, ಸ್ಪಂದನಾ, ಶ್ಲಾಘಾ ಸಾಲಿಗ್ರಾಮ, ಉಗ್ರಂ ಮಂಜು

ಹಾರರ್‌, ಸಸ್ಪೆನ್ಸ್‌ ಚಿತ್ರ ಎಂದಾಕ್ಷಣ ಮನದಲ್ಲಿ ಒಂದಿಷ್ಟು ಭಯ ಆವರಿಸುತ್ತದೆ. ಗಾಂಧಿನಗರದಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಅಬ್ಬರ ಜೋರಿದೆ. ಪ್ರೇಕ್ಷಕರಲ್ಲಿ ಸಿದ್ಧಮಾದರಿಯ ಈ ಚಿತ್ರಗಳ ಬಗ್ಗೆ ಒಂದೆಡೆ ಬೇಸರವೂ ಮಡುಗಟ್ಟಿದೆ. ‘ಕಟಕ’ ಚಿತ್ರ ಇಂಥ ಸಿದ್ಧಸೂತ್ರಗಳನ್ನು ಅಳವಡಿಸಿಕೊಂಡಿರುವ ತುಸು ಭಿನ್ನವಾದ ಸಿನಿಮಾ. ವಾಮಾಚಾರ ಘಟನೆ ಆಧಾರಿತ ಕಥೆಗೆ ಸಿನಿಮೀಯ ಸ್ಪರ್ಶವಿದೆ.

ಕರಾವಳಿ ಭಾಗದಲ್ಲಿ ಹದಿನಾಲ್ಕು ವರ್ಷದ ಹಿಂದೆ ನಡೆದ ವಾಮಾಚಾರದ ಘಟನೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವಿ ಬಸ್ರೂರ್. ಐದು ವರ್ಷದ ಬಾಲಕಿ ಮೇಲೆ ವಾಮಾಚಾರದ ಪ್ರಯೋಗ ನಡೆದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದೇ ಕಥೆಯ ತಿರುಳು.

ಇಡೀ ಚಿತ್ರವು ವಾಮಾಚಾರದ ಎಳೆಗಳ ಸುತ್ತಲೇ ಸುತ್ತುತ್ತದೆ. ಈ ಎಳೆಗಳನ್ನು ಇಟ್ಟುಕೊಂಡೇ ‌ಗ್ರಾಮೀಣ ಪ್ರದೇಶದ ಹಲವು ಬಿಡಿ ಸನ್ನಿವೇಶಗಳನ್ನೂ ಹೆಣೆಯಲಾಗಿದೆ. ನಗರದ ಅಸಹನೀಯ ಬದುಕಿಗೆ ಬೇಸತ್ತು ಹುಟ್ಟೂರಿಗೆ ಬರುವ ವ್ಯಕ್ತಿ ಹೇಗೆ ಅಲ್ಲಿನವರ ಕುತಂತ್ರಗಳಿಗೆ ಸಿಲುಕುತ್ತಾನೆ ಎನ್ನುವ ಅಂಶವೂ ಚಿತ್ರದಲ್ಲಿ ಬೆಸೆದುಕೊಂಡಿದೆ.  

ಹುಟ್ಟೂರಿಗೆ ನಾಯಕನ ಪಯಣ, ಮನೆ ಸುತ್ತುವ ಬೆಂಕಿಯುಂಡೆಗಳು, ಬೆಚ್ಚಿಬೀಳಿಸುವ ಕರ್ಕಶ ಶಬ್ದ– ಇವು ಮೊದಲಾರ್ಧವನ್ನು ಆವರಿಸಿಕೊಂಡಿವೆ. ಬಾಲಕಿಗೆ ವಾಮಾಚಾರ ಪ್ರಯೋಗವು ಪರಿಣಾಮ ಬೀರುವುದರಲ್ಲಿಯೇ ಮೊದಲಾರ್ಧವು ತೆವಳುತ್ತ ಸಾಗುತ್ತದೆ. ಮತ್ತೊಂದೆಡೆ ಕಥೆಯ ಎಳೆ ಅರ್ಥವಾಗದೆ ನೋಡುಗರಲ್ಲಿ ಗೊಂದಲವೂ ಮೂಡುತ್ತವೆ. ದ್ವಿತೀಯಾರ್ಧದಲ್ಲಿ ಈ ಎಲ್ಲ ಗೊಂದಲಗಳಿಗೆ ನಿರ್ದೇಶಕರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಹಾಲಿವುಡ್‌ ಚಿತ್ರಗಳ ಮಾದರಿಯಲ್ಲಿಯೇ ಈ ಚಿತ್ರಕ್ಕೆ ಸೌಂಡ್‌ ಎಫೆಕ್ಟ್‌ ಸಿಕ್ಕಿರುವುದು ವಿಶೇಷ.

ಕುಮಾರ್ (ಅಶೋಕ್) ವಿಜ್ಞಾನ ಶಿಕ್ಷಕ. ಹುಟ್ಟೂರಿನಲ್ಲಿ ಶಾಲೆ ತೆರೆಯಬೇಕೆಂಬುದು ಅವನ ಮಹದಾಸೆ. ಅದಕ್ಕಾಗಿ ನಗರ ತ್ಯಜಿಸಿ ಕುಟುಂಬ ಸಮೇತ ಹಳ್ಳಿಗೆ ಬರುತ್ತಾನೆ. ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಅವನ ಆಸೆಗೆ ಊರಿನ ಪ್ರಭಾವಿಗಳಿಂದ ಅಡ್ಡಗಾಲು.

ಆತನ ಮಗಳು ಕಾವ್ಯಾ (ಶ್ಲಾಘಾ ಸಾಲಿಗ್ರಾಮ) ಮನೆಯಂಗಳದಲ್ಲಿ ಆಟವಾಡುವಾಗ ವಾಮಾಚಾರದ ‘ಕಟಕ ಪ್ರಯೋಗ’ಕ್ಕೆ ತುತ್ತಾಗುತ್ತಾಳೆ. ಆ ನಂತರ ಅವಳದ್ದು ನರಕಯಾತನೆ. ಆಕೆಯನ್ನು ಉಳಿಸಿಕೊಳ್ಳಲು ತಂದೆ–ತಾಯಿಯದ್ದು ಅವಿರತ ಹೋರಾಟ. ಈ ಪ್ರಯೋಗಕ್ಕೆ ಒಳಗಾದರೆ ಇಪ್ಪತ್ತೆಂಟು ದಿನದಲ್ಲಿ ಸಾವು ನಿಶ್ಚಿತ ಎಂದ ಜ್ಯೋತಿಷಿಯ ಮಾತು ಕೇಳಿ ಕುಮಾರ್ ಕುಸಿದುಹೋಗುತ್ತಾನೆ.

ಬಾಲಕಿಯನ್ನು ಈ ಸಂಕಷ್ಟದಿಂದ ಪಾರು ಮಾಡಲು ಕೇರಳದ ಜ್ಯೋತಿಷಿಯೊಬ್ಬ ಒಪ್ಪಿಕೊಳ್ಳುತ್ತಾನೆ. ಬಾಲಕಿಯನ್ನು ಈ ಪ್ರಯೋಗದಿಂದ ಮುಕ್ತಿಗೊಳಿಸಿದ ಬಳಿಕ ಬೇರೊಬ್ಬರಿಗೆ ಇದನ್ನು ಪ್ರಯೋಗಿಸಬೇಕು ಎಂಬುದು ಜ್ಯೋತಿಷಿಯ ಷರತ್ತು. ಕೊನೆಗೆ, ಮಗಳಿಗಾಗಿ ತಾನೇ ಈ ಪ್ರಯೋಗಕ್ಕೆ ಒಳಗಾಗಲು ಕುಮಾರ್ ಮುಂದಾಗುತ್ತಾನೆ. ನಾಯಕನ ಒಳ್ಳೆಯ ಗುಣಕ್ಕೆ ಮನಸೋತ ಆತನ ಗೆಳೆಯ ಈ ಪ್ರಯೋಗಕ್ಕೆ ತುತ್ತಾಗುವುದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಅಶೋಕ್‌, ಸ್ಪಂದನಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಾಲನಟಿ ಶ್ಲಾಘಾ ಸಾಲಿಗ್ರಾಮ ಅಭಿನಯ ಸೊಗಸಾಗಿದೆ. ಸಚಿನ್‌ ಬಸ್ರೂರ್‌ ಛಾಯಾಗ್ರಹಣ ಕೆಲವು ದೃಶಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT