ಹೈದರಾಬಾದ್: ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಅಂತರರಾಷ್ಟ್ರೀಯ ಟಿ–20 ಪಂದ್ಯಕ್ಕೆ ಆತಿಥ್ಯ ವಹಿಸುವ ಕನಸು ಭಗ್ನಗೊಂಡಿತು.
ಧಾರಾಕಾರ ಮಳೆಯಿಂದ ಮೂರನೇ ಪಂದ್ಯವನ್ನು ರದ್ದುಗೊಳಿಸಿದ ಕಾರಣ ಸರಣಿ ಗೆಲ್ಲುವ ವಿರಾಟ್ ಕೊಹ್ಲಿ ಪಡೆಯ ಆಸೆಯೂ ಕಮರಿತು. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡವು.
ಒಂದು ವಾರದಿಂದ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶುಕ್ರವಾರವೂ ಮಳೆಯಾಗಿತ್ತು. ಪಂದ್ಯ ಸಂಜೆ ಏಳು ಗಂಟೆಗೆ ಆರಂಭವಾಗಬೇಕಾಗಿತ್ತು. ಅಂಗಣದಲ್ಲಿ ನೀರು ನಿಂತಿದ್ದ ಕಾರಣ 45 ನಿಮಿಷಗಳ ನಂತರ ಪರಿಶೀಲನೆ ನಡೆಸಲು ನಿರ್ಧರಿಸಲಾಯಿತು.
ಪರಿಶೀಲನೆಯ ನಂತರವೂ ಪಂದ್ಯ ಆರಂಭಿಸಲು ಆಗಲಿಲ್ಲ. ಟಾಸ್ ಕೂಡ ಆಗಿರಲಿಲ್ಲ. ನಂತರ ಅನೇಕ ಬಾರಿ ಪರಿಶೀಲನೆ ನಡೆಸಿ ಕೊನೆಗೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ರಾಂಚಿಯಲ್ಲಿ ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ಗಳಿಂದ ಗೆದ್ದಿತ್ತು.
ಗುವಾಹಟಿಯಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್ಗಳಿಂದ ಗೆದ್ದ ಸೇಡು ತೀರಿಸಿತ್ತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 4–1ರ ಗೆಲುವು ಸಾಧಿಸಿತ್ತು.