ನವದೆಹಲಿ: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಸಹಜ ರೀತಿಯಲ್ಲಿ ಆಸ್ತಿ ಗಳಿಕೆಯ ಆರೋಪ ಹೊತ್ತ ತಮ್ಮ ಪುತ್ರ ಜಯ್ ಷಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಶುಕ್ರವಾರ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಪುತ್ರನ ಕಂಪೆನಿಯಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆತನ ಕಂಪೆನಿಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ, ಭ್ರಷ್ಟಾಚಾರ ನಡೆದಿಲ್ಲ. ಗುತ್ತಿಗೆ, ಭೂಮಿ ಸೇರಿದಂತೆ ಸರ್ಕಾರದಿಂದ ಯಾವ ನೆರವೂ ಪಡೆದಿಲ್ಲ ಎಂದು ಹೇಳಿದ್ದಾರೆ.
ಬೋಫೋರ್ಸ್ ಹಗರಣದಲ್ಲಿ ನಡೆದಂತೆ ತಮ್ಮ ಪುತ್ರ ಯಾರಿಂದಲೂ ಸಾವಿರಾರು ಕೋಟಿ ರೂಪಾಯಿ ಕಮಿಷನ್ ಪಡೆದಿಲ್ಲ ಎಂದು ಷಾ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಅಕ್ಕಿ, ಮೆಕ್ಕೆಜೋಳ, ಆಹಾರಧಾನ್ಯಗಳ ರಫ್ತು ಉದ್ಯಮದಲ್ಲಿ ತಮ್ಮ ಪುತ್ರ ₹1.50 ಕೋಟಿ ನಷ್ಟ ಅನುಭವಿಸಿದ್ದಾನೆ ಎಂದು ಸಮರ್ಥಿಸಿಕೊಂಡಿದ್ದಾರೆ.