ಹಾಸನ: ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವ ಆರಂಭಗೊಳ್ಳುತ್ತಿದ್ದಂತೆ ನಗರದಲ್ಲಿ ಜೋರು ಮಳೆ ಸುರಿಯ ಲಾರಂಭಿಸಿತು. ಮಳೆಯ ನಡುವೆಯೇ ಭಕ್ತರು ಉತ್ಸಾಹದಿಂದ ದೇವಿಯನ್ನು ಕಣ್ತುಂಬಿಕೊಂಡರು.
ಗುರುವಾರ ಶಾಸ್ತ್ರೋಕ್ತವಾಗಿ ದೇಗುಲದ ಬಾಗಿಲು ತೆರೆದರೂ ಸಾರ್ವಜನಿಕರಿಗೆ ದರ್ಶನ ಇರಲಿಲ್ಲ. ಶುಕ್ರವಾರದ ನಸುಕಿನ 5ರಿಂದ ಸಾರ್ವಜನಿಕರಿಗೆ ದರ್ಶನ ನೀಡುವ ಮುನ್ನವೇ ದೇವಸ್ಥಾನದ ಮುಂಭಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಹೊರ ರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ನೂಕು ನುಗ್ಗಲು ಉಂಟಾಯಿತು. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಮಧ್ಯಾಹ್ನ 2.30ರಲ್ಲಿ ಜಿಟಿಜಿಟಿ ಮಳೆಯಾಯಿತು. ನಂತರ ಜೋರು ಮಳೆ ಬಂದ ಪರಿಣಾಮ ಭಕ್ತರು ಪರದಾಡಿದರು. ಸರದಿ ಸಾಲಿನಲ್ಲಿ ನಿಂತಿದ್ದವರು ಮಳೆಯಿಂದ ಆಶ್ರಯ ಪಡೆಯಲು ಕಟ್ಟಡ, ಅಂಗಡಿ ಮತ್ತು ಮನೆಗಳತ್ತ ಓಡಿದರು.