ಕೊಪ್ಪ: ಇಲ್ಲಿಯ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅವರು ಕಬ್ಬಿನ ಬಿಲ್ ಪಾವತಿ ಮಾಡದ್ದನ್ನು ಖಂಡಿಸಿದ ಕಬ್ಬು ಬೆಳೆಗಾರರರ ಒಕ್ಕೂಟದವರು ಗುರುವಾರ ಕಾರ್ಖಾನೆಗೆ ಕಬ್ಬು ಸರಬರಾಜು ವಿಭಾಗಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಮುಖ್ಯದ್ವಾರದ ಮುಂದೆ ಜಮಾಯಿಸಿದ ಒಕ್ಕೂಟದ ಸದಸ್ಯರು ಮತ್ತು ಕಬ್ಬು ಬೆಳೆಗಾರರು ನಿಗದಿತ ಸಮಯಕ್ಕೆ ಸರಬರಾಜು ಮಾಡಿದ ಕಬ್ಬಿಗೆ ಹಣದ ನೀಡದ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಚಂದಗಾಲು ಶಂಕರೇಗೌಡ, ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಸುಮಾರು ₹ 45 ಕೋಟಿ ಬಾಕಿ ಹಣವನ್ನು ಶೀಘ್ರವೇ ನೀಡಿ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಬರಬೇಕು. ಸರಬರಾಜು ಮಾಡಿರುವ ಕಬ್ಬಿಗೆ ತಕ್ಷಣ ಹಣ ಬಿಡುಗಡೆ ಮಾಡಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಮಲ್ಲರಿ ಆರ್. ನಾಯಕ್ ಮಾತನಾಡಿ, ಶೀಘ್ರದಲ್ಲೇ ಕಬ್ಬಿನ ಬಾಕಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಮುಖಂಡರಾದ ಸಿ.ಕೆ. ಕರಿಯಪ್ಪ, ಚಿಕ್ಕಬಳ್ಳಿ ಲಿಂಗರಾಜು, ಶಿವರಾಜು, ತಂಗಳಕೆರೆ ರವೀಂದ್ರ, ಹಲ್ಲೆಗರೆ ಸುಬ್ಬಣ್ಣ, ಹೊನ್ನನಾಕನಹಳ್ಳಿ ಶಂಕರೇಗೌಡ, ಕೊಪ್ಪ ಯೋಗಣ್ಣ ಸೇರಿದಂತೆ ಇತರರು ಇದ್ದರು.