ನಂಜನಗೂಡು: ತಾಲ್ಲೂಕಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರಗತಿಪರ ವೇದಿಕೆ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ ಸಂಘಟನೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾ ನಡೆಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮುಖಂಡ ಬಸವರಾಜ್ ಮಾತನಾಡಿ, ತಾಲ್ಲೂಕಿನ ನಗರ್ಲೆ, ನವೀಲೂರು, ರಾಜೂರು, ನಂದಗುಂದ, ಹೆಮ್ಮರಗಾಲ, ಹಗಿನವಾಳು ಗ್ರಾಮಗಳಲ್ಲಿ ಅಗ್ಗಿಂದಾಗೆ ದಲಿತರ ಮೇಲೆ ಹಲ್ಲೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸೆಗಲಾಗುತ್ತಿದೆ.
ಕೊರೆಹುಂಡಿ ಗ್ರಾಮದಲ್ಲಿ ದಲಿತ ರಮೇಶ್ ನನ್ನು ಕಳ್ಳ ಎಂದು ಬಿಂಬಿಸಿ ಹೊಡೆದು ಕೊಲ್ಲಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ರಕ್ಷಣೆಗೆ ನಿಲ್ಲದೆ ಕಣ್ಣೊರೆಸುವ ತಂತ್ರ ನಡೆಸುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಧನರಾಜ್ ಬೂಲಾ, ದೇವರಸನ ಹಳ್ಳಿ ಸುರೇಶ್, ಮಹದೇವಸ್ವಾಮಿ, ಗುರುಪ್ರಸಾದ್ ಇದ್ದರು.