ಕಕ್ಕೇರಾ: ‘ಆಸ್ತಿಯಲ್ಲಿ ಮಹಿಳೆಯರಿಗೆ ಸಮಪಾಲು ಕೊಡಬೇಕು ಎಂದು ಕಾನೂನಿನಲ್ಲಿ ಹಕ್ಕು ಇದೆ. ಈ ಹಕ್ಕನ್ನು ಮಹಿಳೆಯರು ಪಡೆಯಬಹುದು’ ಎಂದು ಹಿರಿಯ ವಕೀಲ ವಿ.ಎಸ್. ಜೋಶಿ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಪುರುಷರಿಗೆ ಇರುವಷ್ಟೇ ಹಕ್ಕುಗಳು ಮಹಿಳೆ ಯರಿಗೂ ಕಾನೂನು ಕಲ್ಪಿಸಿಕೊಟ್ಟಿದೆ. ಹಾಗಾಗಿ, ಮಹಿಳೆಯರು ಕಾನೂನಿನ ನೆರವು ಪಡೆಯುವ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಬಹುದು’ ಎಂದು ಸಲಹೆ ನೀಡಿದರು. ವಕೀಲ ನಂದಣ್ಣಪ್ಪ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ವಕೀಲ ಂಗಣ್ಣ ಚಿಂಚೋಡಿ ಮಾತನಾಡಿ,‘ಕಾನೂನು ಬಿಟ್ಟು ಮಾನವ ಇಲ್ಲ. ಕಾನೂನಾತ್ಮಕವಾಗಿ ನಡೆದರೆ ಜೀವನ ಸುಗಮ ಆಗಲಿದೆ’ ಎಂದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶ ವಿನೋದ ಬಾಳನಾಯ್ಕ ಮಾತನಾಡಿ,‘ಹೊನ್ನು, ಮಣ್ಣು, ಹೆಣ್ಣು ಮೂರು ಕಾರಣಕ್ಕಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ.
ಸಮಸ್ಯೆಗಳಿಗೆ ಕಡಿವಾಣ ಹಾಕಿ ನಿಮ್ಮ ಊರು, ಮನೆಯ ಸಮಸ್ಯೆ ನೀವೇ ಬಗೆಹರಿಸುವ ಕಾರ್ಯ ಮಾಡಬೇಕು. ಅದಕ್ಕೆ ಕಾನೂನಿನ ಜ್ಞಾನ ಪಡೆಯಬೇಕು’ ಎಂದು ಸಲಹೆ ನೀಡಿದರು. ನಂತರ ಅಕ್ರಮ ಸಕ್ರಮ ಆಸ್ತಿಗಳ ಅಹವಾಲುಗಳನ್ನು ಸ್ವೀಕರಿಸಿದರು.
ನ್ಯಾಯಾಧೀಶ ಅಮರನಾಥ, ಎಸ್.ಸಿದ್ರಾಮಪ್ಪ, ಮಹಾಂತೇಶ ಮಸಳಿ, ಪ್ರಮುಖರಾದ ಗುಂಡಪ್ಪ ಸೊಲ್ಲಾಪುರ, ಭೂ ನ್ಯಾಯ ಮಂಡಳಿ ಸದಸ್ಯ ಪರಮಣ್ಣ ತೇರಿನ್, ಬಸವರಾಜ ಆರೇಶಂಕರ್, ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ನಂದಣ್ಣ ಬಾಕ್ಲಿ, ಸಲೀಂ ಖಾಜಿ, ಯಂಕೂಬ ದೇಸಾಯಿ, ಮಹಿಳೆಯರು ಇದ್ದರು.