ಬೆಂಗಳೂರು: ಅಮೋಘ ಆಟ ಆಡಿದ ಅನಿರ್ಬನ್ ರಾಯ್ ಚೌಧರಿ ಅವರು ಎಂ.ಎಸ್.ರಾಮಯ್ಯ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಮಲ್ಲೇಶ್ವರಂ ಸಂಸ್ಥೆಯ ಅಂಗಳದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅನಿರ್ಬನ್ 9–11, 11–5, 11–6, 8–11, 11–4ರಲ್ಲಿ ಬಿ.ರಕ್ಷಿತ್ ಎದುರು ಗೆದ್ದರು.
ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ ಅನಿರ್ಬನ್ 11–4, 7–11, 11–8, 11–6, 14–12ರಲ್ಲಿ ಅನಿರ್ಬನ್ ತರಫ್ದಾರ್ ಎದುರೂ, ರಕ್ಷಿತ್ 11–7, 11–5, 11–3, 11–4ರಲ್ಲಿ ಶ್ರೇಯಸ್ ಕುಲಕರ್ಣಿ ವಿರುದ್ಧವೂ ಗೆದ್ದಿದ್ದರು.
ಶ್ವೇತಾ ಚಾಂಪಿಯನ್: ಕೆಡೆಟ್ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪಿ.ಎಂ.ಶ್ವೇತಾ 11–9, 11–9, 9–11, 11–7ರಲ್ಲಿ ಸಹನಾ ಎಚ್.ಮೂರ್ತಿ ಸವಾಲು ಮೀರಿದರು.
ವರುಣ್ಗೆ ಪ್ರಶಸ್ತಿ: ಕೆಡೆಟ್ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ವರುಣ್ ಬಿ.ಕಶ್ಯಪ್ 11–7, 11–5, 11–9ರಲ್ಲಿ ರೋಹಿತ್ ಶಂಕರ್ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿದರು.