ಶ್ರೀನಗರ : ಪುಲ್ವಾಮ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್–ಎ–ತೊಯ್ಬಾ (ಎಲ್ಇಟಿ) ಉಗ್ರ ವಾಸಿಂ ಅಹ್ಮದ್ ಷಾ ಅಲಿಯಾಸ್ ಅಬು ಒಸಾಮಾ ಭಾಯ್ (23) ಹಾಗೂ ಆತನ ಸಹಚರ ನೀಸಾರ್ ಅಹ್ಮದ್ ಮೀರ್ ಹತರಾಗಿದ್ದಾರೆ.
ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ವಿವಿಧ ಕಡೆಗಳಲ್ಲಿ ನಡೆದಿದ್ದ ಗಲಭೆಯ ಸಂಚು ರೂಪಿಸುವಲ್ಲಿ ವಾಸಿಂ ಷಾ ಪ್ರಮುಖ ಪಾತ್ರ ವಹಿಸಿದ್ದ. ಲಷ್ಕರ್–ಎ–ತೊಯ್ಬಾ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ಈತ, ಭದ್ರತಾ ಪಡೆಗಳ ಮೇಲೆ ಹಲವು ಬಾರಿ ದಾಳಿ ನಡೆಸಿದ್ದ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಷಾ ಚಲನವಲನ ಕುರಿತು ನಿಗಾ ವಹಿಸಿದ್ದರು. ಹಲವು ಭಯೋತ್ಪಾದಕ ಪ್ರಕರಣಗಳಲ್ಲಿ ಈತ ಬೇಕಾಗಿದ್ದ. ಈತನನ್ನು ಪತ್ತೆ ಮಾಡಲು ನೆರವಾದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಉಗ್ರರ ಸುರಕ್ಷಿತ ಅಡಗುತಾಣ ಎಂದೇ ಪರಿಗಣಿಸಲ್ಪಟ್ಟಿರುವ ಪುಲ್ವಾಮದ ಲಿತ್ತೆರ್ ಪ್ರದೇಶದಲ್ಲಿ ಇರುವ ಕುರಿತು ಮಾಹಿತಿ ದೊರಕಿತ್ತು. ಬಳಿಕ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ ತಂಡ ಸ್ಥಳವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.