ಬೆಂಗಳೂರು: ಕರ್ನಾಟಕ ತಂಡದವರು ವಿನೂ ಮಂಕಡ್ ಟ್ರೋಫಿ ದಕ್ಷಿಣ ವಲಯ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ರಾಜ್ಯ ತಂಡದವರು ಆಡಿದ ಐದು ಪಂದ್ಯಗಳಿಂದ 14 ಪಾಯಿಂಟ್ಸ್ ಸಂಗ್ರಹಿಸಿ ಪ್ರಶಸ್ತಿಯ ಸಾಧನೆ ಮಾಡಿದರು. ಈ ಪೈಕಿ 3 ಪಂದ್ಯಗಳಲ್ಲಿ ಗೆದ್ದಿದ್ದ ನಿಕಿನ್ ಜೋಸ್ ಬಳಗ ಒಂದರಲ್ಲಿ ಸೋತಿತ್ತು.
ಕರ್ನಾಟಕ ತಂಡ ಶನಿವಾರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೇರಳ ವಿರುದ್ಧ ಆಡಬೇಕಿತ್ತು. ಆಲೂರಿನ ಎರಡನೇ ಮೈದಾನದಲ್ಲಿ ನಿಗದಿಯಾಗಿದ್ದ ಈ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಗೋವಾ ಮತ್ತು ಆಂಧ್ರ ಹಾಗೂ ಹೈದರಾಬಾದ್ ಮತ್ತು ತಮಿಳುನಾಡು ನಡುವಣ ಪಂದ್ಯಗಳೂ ಮಳೆಗೆ ಆಹುತಿಯಾದವು.
ಆಂಧ್ರ ತಂಡ ಟೂರ್ನಿಯಲ್ಲಿ ರನ್ನರ್ಸ್ ಅಪ್ ಸಾಧನೆ ಮಾಡಿತು. ಈ ತಂಡ ಕೂಡ 5 ಪಂದ್ಯಗಳಿಂದ 14 ಪಾಯಿಂಟ್ಸ್ ಕಲೆಹಾಕಿತ್ತು. ಆದರೆ ಒಟ್ಟಾರೆ ರನ್ ಗಳಿಕೆಯ ಆಧಾರದಲ್ಲಿ ಕರ್ನಾಟಕ (625) ಆಂಧ್ರ (508) ತಂಡವನ್ನು ಹಿಂದಿಕ್ಕಿತು.
ಹೈದರಾಬಾದ್, ಕೇರಳ, ತಮಿಳುನಾಡು ಮತ್ತು ಗೋವಾ ತಂಡಗಳು ಕ್ರಮವಾಗಿ ಮೂರರಿಂದ ಆರನೇ ಸ್ಥಾನಗಳಲ್ಲಿ ಕಾಣಿಸಿಕೊಂಡವು.