ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ತ್ರಿಪುರದ ರಾಧಾಕೃಷ್ಣ ಅವರ ಕಾಫಿತೋಟದಲ್ಲಿ ಹಳೆಗನ್ನಡ ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಈಚೆಗೆ ಪತ್ತೆಯಾಗಿದೆ.
ಈ ವೀರಗಲ್ಲನ್ನು ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. 4.5 ಅಡಿ ಎತ್ತರ ಮತ್ತು 1.75 ಅಡಿ ಅಗಲ ಇದೆ.
ವೀರಗಲ್ಲಿನ ಮೇಲೆ ಮೂರು ಭಾಗಗಳಾಗಿ ವಿಂಗಡಿಸಿ ಚಿತ್ರಣ ಕೆತ್ತಲಾಗಿದೆ. ಮೊದಲನೆ ಭಾಗದಲ್ಲಿ ಅಪ್ಸರೆಯೊಂದಿಗೆ ವೀರನೊಬ್ಬ ಸಂಗೀತ ಕೇಳುತ್ತಿರುವ ಚಿತ್ರಣವಿದೆ. ಎರಡನೇ ಭಾಗದಲ್ಲಿ ವೀರ ಖಡ್ಗದಿಂದ ಮೃತಪಟ್ಟಿರುವ ಚಿತ್ರಣವಿದೆ.
ಮೂರನೇ ಭಾಗದಲ್ಲಿ ಕೋಟೆ ಕಾಳಗ ಹಾಗೂ ಅಶ್ವಾರೂಢ ವೀರನ ಚಿತ್ರಣವಿದೆ. ಕಳಸದ ಕೃಷಿ ಅಧಿಕಾರಿ ಎಚ್.ಆರ್.ಪಾಂಡುರಂಗ ಅವರು ಈ ವೀರಗಲ್ಲನ್ನು ಪತ್ತೆ ಹಚ್ಚಿದ್ದಾರೆ.