ಅರಕಲಗೂಡು: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ 750 ಭೂ ಪ್ರಕರಣಗಳಿಗೆ ಮಂಜೂರಾತಿ ನೀಡಲಾಯಿತು.
ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಮಂಜೂರಾತಿ ಕೋರಿ ನಮೂನೆ 53 ರಲ್ಲಿ 8396 ಹಾಗೂ ನಮೂನೆ 50ರಲ್ಲಿ 208 ಅರ್ಜಿಗಳು ಬಂದಿವೆ. 5 ಹೋಬಳಿಗಳ 750 ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಮಂಜೂರಾತಿ ನೀಡಲಾಗಿದೆ ಎಂದರು.
ರಾಮನಾಥಪುರ ಹೋಬಳಿ ಕುಟಕಮಂಟಿ ಕಾವಲಿನ 90 ಎಕರೆಪ್ರದೇಶವನ್ನು 23 ಜನರಿಗೆ ನಿಯಮ ಮೀರಿ ಮಂಜೂರು ಮಾಡಲಾಗಿದೆ. ಇದನ್ನು ಬಗರ್ ಹುಕುಂ ಸಮಿತಿಯಾಗಲಿ, ಜಿಲ್ಲಾಧಿಕಾರಿ ಅಥವಾ ಸರ್ಕಾರ ಮಂಜೂರು ಮಾಡಿರುವುದಕ್ಕೆ ಯಾವುದೆ ದಾಖಲೆಗಳಿಲ್ಲ. ಈ ಕುರಿತು ಪರಿಶೀಲಿಸಿ ಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ತಹಶೀಲ್ದಾರ್ ಪ್ರಸನ್ನ ಮೂರ್ತಿ ಅವರಿಗೆ ಸೂಚಿಸಿದರು.
ಕಸಬಾ ಹೋಬಳಿಯಿಂದ 1533, ಮಲ್ಲಿಪಟ್ಟಣ 1013, ದೊಡ್ಡಮಗ್ಗೆ 2430, ರಾಮನಾಥಪುರ 957 ಹಾಗೂ ಕೊಣನೂರು ಹೋಬಳಿಯಿಂದ 1463 ಅರ್ಜಿಗಳು ಬಂದಿವೆ ಎಂದು ವಿವರಿಸಿದರು. ಭೂಮಿ ಮಂಜೂರಾತಿ ವೇಳೆ ಗ್ರಾಮದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ರುದ್ರಭೂಮಿಗೆ ಅಗತ್ಯವಾದ ಸ್ಥಳವನ್ನು ಮೀಸಲಿರಿಸಲು ಮೊದಲು ಕ್ರಮ ಕೈಗೊಂಡು ನಂತರ ಉಳಿದ ಜಮೀನಿನ ಹಂಚಿಕೆ ನಡೆಯಲಿದೆ. ಕೆರೆ ಒತ್ತುವರಿ, ಗುಂಡು ತೋಪು, ಸ್ಮಶಾನದ , ಶಾಲೆಗಳಿಗೆ ಮೀಸಲಾಗಿರುವುದನ್ನು ಹೊರತು ಪಡಿಸಿ ಉಳಿಕೆ ಜಮೀನನ್ನು ಮಂಜೂರು ಮಾಡಲಾಗುವುದು ಎಂದು ಹೇಳಿದರು.
ಮುಂದಿನ ಸಭೆಗಳಲ್ಲಿ ಸಮಿತಿ ಬಾಕಿ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದೆ. ಹೇಮಾವತಿ ಪುನರ್ವಸತಿ ಯೋಜನೆಗೆ ಮೀಸಲಿರಿಸಿದ್ದ ಜಮೀನನ್ನು ಬಗರ್ ಹುಕುಂ ನಲ್ಲಿ ಉಳುಮೆ ಮಾಡಿದ್ದರೆ ಅಂತಹವರಿಗೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು ಅಂತಹ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಪಟ್ಟಿ ತಯಾರಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಭೂ ಮಂಜೂರಾತಿ ಕುರಿತು ಕೆಲವು ಕಂದಾಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ರೈತರಿಂದ ಹಣ ಪಡೆದಿರುವ ಕುರಿತು ವ್ಯಾಪಕ ದೂರುಗಳು ಬಂದಿದ್ದು ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಮಿತಿ ಸದಸ್ಯರಾದ ಸೋಮಶೇಖರ್, ಅನ್ನಪೂರ್ಣ, ಬಿ.ಎಂ.ರವಿ, ತಹಶೀಲ್ದಾರ್ ಎಚ್.ವಿ. ಪ್ರಸನ್ನಮೂರ್ತಿ ಹಾಗೂ ಕಂದಾಯ ಇಲಖೆ ಅಧಿಕಾರಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.