ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ರೋಷನ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ನಾಗರಾಜ ನಾಯಕ ಮಾತನಾಡಿ, ‘ಬೇಗ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ದೇಶದ ಪ್ರಧಾನಿಯವರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡುವ ಹಕ್ಕು ಅವರಿಗೆ ಇಲ್ಲ. ಒಬ್ಬ ವಿವಾಹಿತ ಹೆಣ್ಣಿಗೆ ಮಗುವಾಗದಿದ್ದರೆ ಸಮಾಜ ಆಕೆಯನ್ನು ಬಂಜೆ ಎಂದು ಕರೆಯುತ್ತದೆ.
ಆದರೆ ಒಬ್ಬ ಭಿಕ್ಷುಕ ಆಕೆಯನ್ನು ಅಮ್ಮ ಎಂದು ಕರೆಯುತ್ತಾನೆ. ಆತನಿಗೆ ಇರುವ ಸಂಸ್ಕಾರ ಕೂಡ ಸಚಿವ ಸ್ಥಾನದಲ್ಲಿ ಇರುವ ಬೇಗ್ ಅವರಿಗೆ ಇಲ್ಲ. ಬಹುಶಃ ಕಾಂಗ್ರೆಸ್ ಸಂಸ್ಕೃತಿಯೇ ಈ ರೀತಿಯದ್ದಾಗಿರಬೇಕು. ಅವರಿಗೆ ಇನ್ನು ಆರು ತಿಂಗಳಿನಲ್ಲಿ ತಾವು ಅಧಿಕಾರದಿಂದ ಕೆಳಗಿಳಿಯುತ್ತೇವೆ ಎನ್ನುವುದು ಖಾತ್ರಿಯಾಗಿದೆ’ ಎಂದರು.
‘ನಾವು ಬಿಜೆಪಿಯವರು ಏನೇ ಮಾಡಿದರೂ ಬಹಳ ಸೌಜನ್ಯವಾಗಿಯೇ ಮಾಡುತ್ತೇವೆ. ದಹನ ಮಾಡುವ ಬೇಗ್ ಅವರ ಪ್ರತಿಕೃತಿಗೆ ಕೂಡ ₹ 2 ಸಾವಿರ ಮೌಲ್ಯದ ಅಂಗಿಯನ್ನೇ ಹಾಕಿದ್ದೇವೆ’ ಎಂದು ವ್ಯಂಗ್ಯವಾಡಿದರು. ಮುಖಂಡರಾದ ರೂಪಾಲಿ ನಾಯ್ಕ, ನಾಗರಾಜ ಜೋಶಿ, ರಾಜೇಶ ನಾಯ್ಕ, ಉದಯ ಬಶೆಟ್ಟಿ ಹಾಜರಿದ್ದರು.