ಲಖನೌ: ‘ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆಯಾದ ನಂತರ ಭಾರತ ವಿಶ್ವದ ಅತ್ಯಂತ ಪ್ರಬಲ ದೇಶವಾಗಿ ಬೆಳೆದಿದೆ. ದೇಶದ ಪ್ರತಿಷ್ಠೆ ಜಾಗತಿಕ ಮಟ್ಟದಲ್ಲಿ ವೃದ್ಧಿಸಿದೆ’ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾನುವಾರ ಇಲ್ಲಿ ನಡೆದ ‘ಭಾರತೀಯ ಲೋಧಿ ಮಹಾಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
‘ದೇಶದ ಗಡಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಭಾರತ ದುರ್ಬಲವಲ್ಲ ಎಂಬುದನ್ನು ಚೀನಾ ಅರ್ಥಮಾಡಿಕೊಳ್ಳಲು ಆರಂಭಿಸಿದೆ. ದೇಶದ ಶಕ್ತಿ ವೃದ್ಧಿಸಿದೆ’ ಎಂದೂ ಹೇಳಿದ್ದಾರೆ.
ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿದೆ ಎಂದೂ ದೂರಿರುವ ಅವರು, ‘ಅದು(ಪಾಕಿಸ್ತಾನ) ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಆದರೆ, ನಮ್ಮ ರಕ್ಷಣಾ ಪಡೆ ಯೋಧರು ಪ್ರತಿದಿನ ಎರಡರಿಂದ ನಾಲ್ಕು ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.