ಅಹಮದಾಬಾದ್: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕೆಲಸ ಮಾಡುವುದಾಗಿ ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ಹೇಳಿದ್ದಾರೆ.
‘ನಾನು ವಿರೋಧ ಪಕ್ಷ ಕಾಂಗ್ರೆಸ್ ಗೆಲುವಿಗಾಗಿ ಕೆಲಸ ಮಾಡುವುದಿಲ್ಲ. ಆದರೆ, ನನ್ನ ಸಮುದಾಯಕ್ಕೆ ಕಾನೂನಾತ್ಮಕ ಹಕ್ಕುಗಳನ್ನು ದೊರೆಕಿಸಿಕೊಡಲು ಬದ್ದನಾಗಿದ್ದೇನೆ’ ಎಂದು ಸಮಾವೇಶವೊಂದರಲ್ಲಿ ತಿಳಿಸಿದ್ದಾರೆ.
‘ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಅದು ಸರ್ವಾಧಿಕಾರತ್ವದ ವಿರುದ್ಧದ ಮತದಾನವಾಗಿರುತ್ತದೆ. ಆಗಲೂ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದಿದ್ದಾರೆ.
ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ನಮ್ಮದು ವ್ಯವಸ್ಥೆಯ ವಿರುದ್ಧದ ಮತ್ತು ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ವಿರುದ್ಧ ಮಾತನಾಡುವವರ ವಿರುದ್ಧದ ಹೋರಾಟ.
ಒಂದು ವೇಳೆ ಬಿಜೆಪಿ ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಒಪ್ಪಿದರೆ ನಮ್ಮ ಆಂದೋಲನವನ್ನು ನಿಲ್ಲಿಸುತ್ತೇವೆ. ಇಲ್ಲವಾದರೆ ಬೇರೆ ದಾರಿಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.