ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಯೀದ್ ವಿರುದ್ಧ ಭಯೋತ್ಪಾದನೆ ಆರೋಪ ಕೈಬಿಟ್ಟ ಪಾಕ್

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ವಿರುದ್ಧ ಭಯೋತ್ಪಾದನೆ ಸಂಬಂಧಿತದ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಹಿಂದಕ್ಕೆ ಪಡೆದಿದೆ.

ಜಮಾತ್‌ ಉದ್ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಹಾಗೂ ಆತನ ನಾಲ್ವರು ಸಹಚರರ ವಿರುದ್ಧ ಸರ್ಕಾರವು ಉಗ್ರ ಚಟುವಟಿಕೆ ಸಂಬಂಧಿತ ಆರೋಪ ಹೊರಿಸಿಲ್ಲ ಎಂದು ಪಂಜಾಬ್‌ ಸರ್ಕಾರದ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್‌ನ ಪರಿಶೀಲನಾ ಮಂಡಳಿಗೆ ಶನಿವಾರ ತಿಳಿಸಿದ್ದಾರೆ.

ಭಯೋತ್ಪಾದನಾ ನಿಗ್ರಹ ಕಾಯ್ದೆ (ಎಟಿಎ) ಅಡಿಯಲ್ಲಿ ಹಫೀಜ್‌ನನ್ನು ಬಂಧಿಸಲಾಗಿತ್ತು. ಕಳೆದ ಜನವರಿ 31 ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.

ತನ್ನ ಬಂಧನವನ್ನು ಪ್ರಶ್ನಿಸಿ ಲಾಹೋರ್ ಹೈಕೋರ್ಟ್‌ಗೆ ಆತ ಅರ್ಜಿ ಸಲ್ಲಿಸಿದ್ದ. ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಬಂಧನ
ದಲ್ಲಿ ಇಡಲಾಗಿದೆ ಎಂಬುದು ಆತನ ವಾದ. ಆದ್ದರಿಂದ ಕಳೆದ ಬಾರಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆತನ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು.

ಇದೀಗ ಭಯೋತ್ಪಾದನೆಯ ಆರೋಪಗಳಿಲ್ಲದ ತನ್ನ ಕಕ್ಷೀದಾರರನ್ನು ಬಿಡುಗಡೆಗೊಳಿಸುವಂತೆ ಕೋರಿ ಹಫೀಜ್‌ ಪರ ವಕೀಲ ಎ.ಕೆ.ದೋಗರ್‌ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ, ಹಫೀಜ್ ಸಯೀದ್‌ ಅವನ ಗೃಹಬಂಧನ ಅವಧಿಯ ವಿಸ್ತರಣೆ ಬೇಡ ಎಂದು ಕೂಡ ಪಾಕಿಸ್ತಾನ ಫೆಡರಲ್ ನ್ಯಾಯಾಂಗ ಪರಿಶೀಲನಾ ಮಂಡಳಿಗೆ ಭಾನುವಾರ ಹೇಳಿದೆ. ಬಂಧನದ ಅವಧಿ ವಿಸ್ತರಿಸುವಂತೆ ತಾನು ಮಾಡಿಕೊಂಡ ಮನವಿಯನ್ನು ಅದು ಹಿಂದಕ್ಕೆ ಪಡೆದಿದೆ.

ಹಫೀಜ್‌ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಇಜಾಜ್ ಅಫ್ಜಲ್ ಖಾನ್ ನೇತೃತ್ವದ ಮಂಡಳಿಗೆ ಪಾಕಿಸ್ತಾನದ ಪಂಜಾಬ್‌ ಸಚಿವಾಲಯ ಈ ಕುರಿತು ಮನವಿ ಸಲ್ಲಿಸಿದೆ. ಹಫೀಜ್‌ ಹಾಗೂ ಆತನ ಸಹಚರರಾದ ಅಬ್ದುಲ್ಲಾ ಉಬಿದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಜಿ ಕಾಶಿಫ್ ಹುಸೇನ್ ಅವರ ಬಂಧನ ಅವಧಿಯ ವಿಸ್ತರಣೆಯೂ ಬೇಡ ಎಂದು ಸಚಿವಾಲಯ ಹೇಳಿದೆ.

ಈ ಮನವಿಯನ್ನು ಮಂಡಳಿಯು ಪುರಸ್ಕರಿಸಿದೆ. ‘‌ಸಾರ್ವಜನಿಕ ನಿರ್ವಹಣಾ ಆದೇಶ–1960’ರ ಬಂಧನದ ಅವಧಿಯನ್ನು ಇದೇ 24ರವರೆಗೆ ವಿಸ್ತರಿಸುವ ಕಾರಣ, ಪುನಃ ಭಯೋತ್ಪಾದನಾ ನಿಗ್ರಹ ಕಾಯ್ದೆ ಅಡಿ ಗೃಹ ಬಂಧನದ ಅವಧಿಯನ್ನು ವಿಸ್ತರಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಈ ಮನವಿ ಸಲ್ಲಿಸಲಾಗಿದೆ’ ಎಂದು ಪಿಟಿಐಗೆ ಸಚಿವಾಲಯ ಸಮರ್ಥನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT