ಕಲಬುರ್ಗಿ: ‘6ನೇ ವೇತನ ಆಯೋಗ ವರದಿ ನೀಡುವುದು ವಿಳಂಬವಾಗಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಬೇಕು’ ಎಂಬ ನಿರ್ಣಯವನ್ನು ಭಾನುವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ 9ನೇ ತ್ರೈಮಾಸಿಕ ಸಭೆಯಲ್ಲಿ ಕೈಗೊಳ್ಳಲಾಯಿತು.
‘6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಾಗ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಏಕ ಕಾಲದಲ್ಲಿ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಕರ್ನಾಟಕ ಮಹಾನಗರ ಪಾಲಿಕೆಗಳು (ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ನಿಯಮಗಳು 2011ಕ್ಕೆ ತಿದ್ದುಪಡಿ ತರಬೇಕು. ಮುಂಬಡ್ತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಸೂಕ್ತ ಅನುಪಾತ ನಿಗದಿಪಡಿಸಬೇಕು ಮತ್ತು ತಿದ್ದುಪಡಿ ಮಾಡಬೇಕು. ಅನ್ಯ ಇಲಾಖೆಯಿಂದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸುವ ಕ್ರಮ ಕೈಬಿಡಬೇಕು’ ಎಂಬ ನಿರ್ಣಯಗಳನ್ನೂ ಅಂಗೀಕರಿಸಲಾಯಿತು.
ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಚ್. ಗುರುಮೂರ್ತಿ, ಉಪಾಧ್ಯಕ್ಷ ಬಿ.ವೆಂಕಟರಾಮ್, ಪ್ರಧಾನ ಕಾರ್ಯದರ್ಶಿ ಟಿ.ಸಿ. ಬಸವರಾಜಯ್ಯ ಇದ್ದರು.