ಬೆಂಗಳೂರು: ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಸಾಫ್ಟ್ವೇರ್ ಎಂಜಿನಿಯರ್ ನಂದಿನಿ ಎಂಬುವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ತಲಘಟ್ಟಪುರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡಿರುವ ನಂದಿನಿ ಅವರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.
‘ಬಿಟಿಎಂ ಲೇಔಟ್ ನಿವಾಸಿಯಾದ ನಂದಿನಿ, ಪ್ರಾಣಿ ದಯಾ ಸಂಘದಲ್ಲೂ ತೊಡಗಿಸಿಕೊಂಡಿದ್ದಾರೆ. ಶನಿವಾರ ಸಂಜೆ ಠಾಣೆಗೆ ಬಂದಿದ್ದ ಅವರು, ಆವಲಹಳ್ಳಿ ಬಳಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಕೆಲವರು ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.’
‘ಆ ಮಾಹಿತಿಯಂತೆ ಸಿಬ್ಬಂದಿ ಸಂಜೆ 6 ಗಂಟೆಗೆ ಸ್ಥಳಕ್ಕೆ ಹೋಗಿ
ಮೂರು ಗೋವುಗಳನ್ನು ರಕ್ಷಿಸಿ ಕೋರಮಂಗಲದ ಪ್ರಾಣಿ ದಯಾ ಸಂಘದ ಕೇಂದ್ರಕ್ಕೆ ಬಿಟ್ಟು ಬಂದಿದ್ದರು’ ಎಂದು ತಲಘಟ್ಟಪುರ ಠಾಣೆಯ ಪೊಲೀಸರು ತಿಳಿಸಿದರು.