ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರೆ ಹೋಬಳಿ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರದಲ್ಲಿ ಗ್ರಾಮ ಸಮೃದ್ಧಿ ಸ್ವಚ್ಛತಾ ಪಾಕ್ಷಿಕ ಆಚರಣೆ ಸಂಬಂಧ ಗ್ರಾಮ ಸಭೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಗ್ರಾಮಗಳ ಸ್ವಚ್ಛತೆಯಿಂದ ದೇಶದ ಸ್ವಚ್ಛತೆ ಸಾಧ್ಯ ಎಂದರು.
ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಯಲು ಬಹಿರ್ದೆಸೆಗೆ ಮುಕ್ತಿ ಕಾಣಿಸಿ ಪ್ರತಿಯೊಂದು ಮನೆಯೂ ಸ್ವತಂತ್ರ ಶೌಚಾಲಯ ಹೊಂದಬೇಕು. ಆಗ ಮಾತ್ರ ಗಾಂಧಿ ಪರಿಕಲ್ಪನೆಯ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸರ್ಕಾರ ಪಂಚಾಯತ್ರಾಜ್ ವ್ಯವ ಸ್ಥೆಯ ಮೂಲಕ ಅನೇಕ ಯೋಜನೆ ಮತ್ತು ಅನುದಾನಗಳನ್ನು ನೀಡುತ್ತಿದೆ. ಜನರು ಅವುಗಳನ್ನು ಯಶಸ್ವಿಯಾಗಿ ಮತ್ತು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಯಾನಂದ್, ಜಿಲ್ಲಾ ಪಂಚಾಯಿತಿ ಸದಸ್ಯ ಚುಂಚೇಗೌಡ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಸಭೆಯೂ ಆಯೋಜನೆಗೊಂಡಿತ್ತು.
ಸಾರ್ವಜನಿಕರ ಅಧಿಕಾರಿಗ ಳೊಂದಿಗೆ ಸಮಸ್ಯೆಗಳು ಮತ್ತು ದೂರುಗ ಳನ್ನು ವಿನಿಮಯ ಮಾಡಿಕೊಂಡರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮತ್ತು ಹೊನ್ನಾವರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.