ಕಾರವಾರ: ಅಂಕೋಲಾ ತಾಲ್ಲೂಕಿನ ಅಂದ್ಲೆ ಸೀ ಫುಡ್ ಫ್ಯಾಕ್ಟರಿ ಬಳಿಯ ಮಾವಿನ ತೋಟದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, 6 ಮಂದಿಯನ್ನು ಬಂಧಿಸಿ ₹ 23,660 ನಗದು, 3 ಕಾರು, 7 ಬೈಕ್, ಒಂದು ಆಟೋವನ್ನು ವಶ ಪಡಿಸಿಕೊಂಡಿದ್ದಾರೆ.
ಅಡ್ಡೆಯಲ್ಲಿ ಇದ್ದ ಸುಮಾರು 15ಕ್ಕೂ ಅಧಿಕ ಮಂದಿಯಲ್ಲಿ ವಿನಾಯಕ ನಾಯ್ಕ, ಮಾನೇಶ್ವರ ಪಟಗಾರ, ಗಿರಿಧರ ಬಂಟ, ಇಕ್ಬಾಲ್ ಶೇಖ್, ಸುರೇಶ ಕಡ್ಲೆಗುಂದಿ, ರಾಜೇಶ ಗೌಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉಳಿದವರು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ನೇತೃತ್ವದಲ್ಲಿ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ರಂಗನಾಥ, ಡಿಸಿಬಿ ಇನ್ಸ್ಪೆಕ್ಟರ್ ಶರಣಗೌಡ ಪಾಟೀಲ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು ಎಂದು ಅಂಕೋಲಾ ವೃತ್ತ ನಿರೀಕ್ಷಕ ಬಸಪ್ಪ ಬುರ್ಲಿ ಮಾಹಿತಿ ನೀಡಿದರು.