ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳ ಹಾವಳಿಗೆ ಬೇಕು ನಿಯಂತ್ರಣ

Last Updated 16 ಅಕ್ಟೋಬರ್ 2017, 8:35 IST
ಅಕ್ಷರ ಗಾತ್ರ

ಕೊಪ್ಪಳ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ. ನಗರಸಭೆಯ ಮುನ್ನೆಚ್ಚರಿಕೆಗೂ ಯಾವುದೇ ಬೆಲೆ ನೀಡದ ಜಾನುವಾರು ಮಾಲೀಕರು ಹಾಗೇ ಬಿಟ್ಟಿದ್ದಾರೆ. ಇವುಗಳಿಂದಾಗಿ ನಗರದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಅಸಹಾಯಕರಾಗಿದ್ದಾರೆ.

ಎಲ್ಲೆಲ್ಲಿ ಇವೆ?: ಗಂಜ್‌ ವೃತ್ತ, ತಹಶೀಲ್ದಾರ್‌ ಕಚೇರಿ ಪ್ರದೇಶ, ಕೇಂದ್ರ ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶ ಹೀಗೆ ದಟ್ಟಣೆ ಹೆಚ್ಚು ಇರುವ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಸುತ್ತಾಡುವುದು, ನಡುರಸ್ತೆಯಲ್ಲೇ ಹಾಯಾಗಿ ಮಲಗುವುದು ನಗರದಲ್ಲಿ ಕಾಣುವ ನಿತ್ಯದ ನೋಟ.

ಹಲವಾರು ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಜಾನುವಾರು ಮಲಗಿರುವುದು ಕಾಣದೇ ತೊಂದರೆ ಗೊಳಗಾಗಿದ್ದಾರೆ. ಕೂದಲೆಳೆಯ ಅಂತರದಲ್ಲಿ ಅಪಘಾತಗಳು ತಪ್ಪಿದ ಉದಾಹರಣೆಗಳೂ ಇವೆ. ನಗರದ ಸಂಚಾರ ಸುವ್ಯವಸ್ಥೆ ಹಾಗೂ ಸುರಕ್ಷತೆಯ ದೃಷ್ಟಿಯಿಂದಾದರೂ ಬಿಡಾಡಿ ದನಗಳನ್ನು ಕಟ್ಟಿಹಾಕಬೇಕು ಎಂಬುದು ನಾಗರಿಕರ ಒತ್ತಾಯ.

ಏನು ಮಾಡಬಹುದು?: ನಗರಸಭೆ ನಿರ್ದಾಕ್ಷಿಣ್ಯವಾಗಿ ಜಾನುವಾರುಗಳನ್ನು ಹಿಡಿದು ನಗರದಲ್ಲಿರುವ ಗೋಶಾಲೆಗೆ ಸಾಗಿಸಬಹುದು. ಜಾನುವಾರು ಸಾಕಣೆದಾರರನ್ನು ಪತ್ತೆಹಚ್ಚಿ ಈ ರೀತಿ ಬಿಡಾಡಿ ದನಗಳ ಮಾಲೀಕರಿಗೆ ದಂಡ ವಿಧಿಸಬಹುದು. ಅಥವಾ ಸಾಕಲು ಆಸಕ್ತಿಯುಳ್ಳವರಿಗೆ ಹರಾಜು ಮೂಲಕ ಕೊಡಬಹುದು ಎಂದು ಸಲಹೆ ಮಾಡುತ್ತಾರೆ ನಗರದ ಹಿರಿಯ ನಾಗರಿಕ ಗೋವಿಂದರಾವ್‌.

ಅಡೆತಡೆಗಳೇನು?: ನಗರಸಭೆ ಒಂದೆರಡು ಬಾರಿ ಪತ್ರಿಕಾ ಪ್ರಕಟಣೆ ಕೊಟ್ಟು ಎಚ್ಚರಿಸಿದ್ದು ಬಿಟ್ಟರೆ ಜಾನುವಾರು ನಿಯಂತ್ರಣ ಸಂಬಂಧಿಸಿ ಗಂಭೀರ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ ಎಂಬುದು ಕೇಳಿಬರುತ್ತಿರುವ ಆರೋಪ. ನಗರಸಭೆಯ ಸಾಮಾನ್ಯ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ಆದರೆ, ನಿರ್ಧಾರಕ್ಕೆ ಬಂದಿಲ್ಲ ಎಂದು ಸದಸ್ಯರೇ ಹೇಳುತ್ತಿರುವ ಮಾತು.

ಆದರೆ, ಗೋಶಾಲೆಗೆ ಸಾಗಿಸಿದ ತಕ್ಷಣ ಎಚ್ಚೆತ್ತುಕೊಳ್ಳುವ ಮಾಲೀಕರು ತಕ್ಷಣವೇ ಹೋಗಿ ಜಾನುವಾರುಗಳನ್ನು ವಾಪಸ್‌ ತರಲು ಮುಂದಾಗುತ್ತಾರೆ. ಒಮ್ಮೆ ಜಾನುವಾರು ಪಡೆದ ನಂತರ ವಾಪಸ್‌ ಕೊಡುವುದು ನಮಗೂ ಸಮಸ್ಯೆ ಎನ್ನುತ್ತವೆ ಗೋಶಾಲೆಯ ಮೂಲಗಳು.

ಕಾರಟಗಿ ಮಾದರಿ: ಇತ್ತೀಚೆಗೆ ಕಾರಟಗಿಯಲ್ಲಿ ಸ್ಥಳೀಯಾಡಳಿತವೇ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಿತ್ತು. ಅದೇ ಮಾದರಿಯಲ್ಲಿ ನಗರದಲ್ಲೂ ಕಾರ್ಯಾಚರಣೆ ನಡೆಯಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT