ಮೂಡುಬಿದಿರೆ: ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಸಯುತ್ತಿದ್ದು, ಹಿಂದುಳಿದ ವರ್ಗದವರೇ ಬಲಿ ಪಶುಗಳಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.
ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಬಿಜೆಪಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕ್ಷೇತ್ರಮಟ್ಟದ ಮೊದಲ ಹಿಂದುಳಿದ ವರ್ಗಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಿದ್ದರಾಮಯ್ಯ ಅವರ ಅನೇಕ ಭೂ ಅವ್ಯವಹಾರಗಳಲ್ಲಿ ಈಗಾಗಲೇ ಎರಡು ಪ್ರಕರಣಗಳ ಬಗ್ಗೆ ನಾಡಿನ ಜನತೆಯ ಮುಂದೆ ಇಟ್ಟಿದ್ದೇನೆ’ ಅವರ ಇನ್ನೂ ಅನೇಕ ಅವ್ಯವಹಾರಗಳ ಬಗ್ಗೆ ನನ್ನಲ್ಲಿ ಮಾಹಿತಿಗಳಿವೆ’ ಎಂದರು.
ಸಿದ್ದರಾಮಯ್ಯ ತಾವು ತಪ್ಪೇ ಮಾಡಿಲ್ಲ ಎನ್ನುವುದಾದರೆ ವಿಧಾನ ಸೌಧದ ಮುಂದೆ ವೇದಿಕೆ ಕಲ್ಪಿಸಿಕೊಟ್ಟು ಚರ್ಚೆಗೆ ಮುಂದೆ ಬರಲಿ. ನಾನು ತಪ್ಪು ಮಾಡಿದ್ದೇನೆ ಎಂದಾದಲ್ಲಿ ವಿಧಾನಸೌಧದ ಮುಂದೆಯೇ ನೇಣು ಹಾಕಿಕೊಳ್ಳುವೆ. ಸಿದ್ದರಾಮಯ್ಯ ತಪ್ಪು ಮಾಡಿದ್ದು ಸಾಬೀತಾದರೆ ತಕ್ಷಣ ರಾಜೀನಾಮೆ ಕೊಡಲಿ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ‘ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಭಯೋತ್ಪಾದಕರ ಬೆಂಬಲಕ್ಕೆ ನಿಂತಿದೆ. ಇಲ್ಲಿ ಅಭಿವೃದ್ಧಿಯ ಮಂತ್ರದ ಮೂಲಕವೇ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆದ್ದು ತೋರಿಸಿ ಕಾಂಗ್ರೆಸ್ನ ಗೂಂಡಾ ಸಂಸ್ಕೃತಿಗೆ ತಕ್ಕ ಉತ್ತರ ಕೊಡುವುದಾಗಿ’ ಅವರು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ‘ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ತನಕ ಹಿಂದುಳಿದ ವರ್ಗಗಳವರ ಉದ್ಧಾರ ಸಾಧ್ಯವಿಲ್ಲ. ಅವರು ಬೆಳೆಯಲು ಮತ್ತು ಕುಲಕಸುಬನ್ನೂ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರೊಂದು ಮುಖವಾಡ. ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಶಕ್ತಿ ಬೆಳೆಸಬೇಕು ಎನ್ನುವ ಕನಸಿಗೆ ಅಡ್ಡಿಯಾಗಿ ನೋವಿನಿಂದ ಕಾಂಗ್ರೆಸ್ ತೊರೆದೆ’ ಎಂದರು.
‘ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾ ಡಿರುವ ರೋಷನ್ ಬೇಗ್ ನಡೆ ಖಂಡನೀಯ. ಒಬ್ಬ ಜನಪ್ರತಿನಿಧಿಯ ಸ್ಥಾನದಲ್ಲಿರುವರನ್ನು ಗೌರವಿಸುವುದು ಅವರಿಗೆ ತಿಳಿಯುತ್ತಿಲ್ಲ ಎಂದಾದರೆ ಅವರು ಏನಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಬಂದರೆ ಎಕ್ಕಡ(ಚಪ್ಪಲಿ)ಏಟು ನೀಡಲು ಮುಂದಾಗೋಣ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಹೇಳಿದರು.
ಹಿಂದುಳಿದ ವರ್ಗಗಳ ಮೂಡುಬಿದಿರೆ ಮಂಡಳ ಅಧ್ಯಕ್ಷ ಗೋಪಾಲ್ ಶೆಟ್ಟಿಗಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಮೂಡುಶೆಡ್ಡೆ ವಂದಿಸಿದರು. ಬೆಳುವಾಯಿ ಭಾಸ್ಕರ ಆಚಾರ್ಯ ಹಾಗೂ ಗಣೇಶ ಅರ್ಬಿ ಕಾರ್ಯಕ್ರಮ ನಿರೂಪಿಸಿದರು.
ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಚಂದ್ರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಶ್ ಕಣಿಮರಡ್ಕ, ಜಿಲ್ಲಾ ಉಪಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಉಪಸ್ಥಿತರಿದ್ದರು.
ಸಮಾರಂಭಕ್ಕೆ ಮೊದಲು ಅತಿಥಿ ಗಣ್ಯರು ಹಾಗೂ ನಾಯಕರು ಸೇರಿದಂತೆ ಕಾರ್ಯಕರ್ತರಿಂದ ಸ್ವರಾಜ್ಯ ಮೈದಾನದಿಂದ ಸಭಾಂಗಣದ ವರೆಗೆ ಪೇಟೆಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.