ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರು ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದರು.
ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅನಂತ್ ಕುಮಾರ್ ಅವರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಉಳಿದಿದ್ದರು. ಆ ಸಂದರ್ಭದಲ್ಲಿಯೆ ಪ್ರಮೋದ್ ಅವರೂ ಪ್ರವಾಸಿ ಮಂದಿರಕ್ಕೆ ಹೋದಾಗ ಭೇಟಿ ಮಾಡಿದರು. ಕೆಲ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದರು ಎಂದು ತಿಳಿದು ಬಂದಿದೆ.
ಬಿಜೆಪಿ ಮುಖಂಡ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇದ್ದರು.
ಪ್ರಮೋದ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಆಕಸ್ಮಿಕ ಭೇಟಿ: ಪ್ರಮೋದ್ ಮಧ್ವರಾಜ್
‘ಅನಂತ್ ಕುಮಾರ್ ಅವರ ಭೇಟಿ ಆಕಸ್ಮಿಕ. ಫ್ರೆಶ್ ಅಪ್ ಆಗಲು ಪ್ರವಾಸಿ ಮಂದಿರಕ್ಕೆ ಹೋದಾಗ ಅವರು ಇರುವುದು ಗೊತ್ತಾಯಿತು. ಆದ್ದರಿಂದ ಮಾತನಾಡಿಸಿದೆ ಅಷ್ಟೆ. ಇದರಲ್ಲಿ ಬೇರೇನೂ ಇಲ್ಲ’ ಎಂದು ಪ್ರಮೋದ್ ಮಧ್ವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
*
ಬಿಜೆಪಿ ಮುಳುಗುವ ದೋಣಿ
ಚಿಕ್ಕಬಳ್ಳಾಪುರ: ‘ಮಂಗಳೂರಿನ ಕಾಂಗ್ರೆಸ್ ಶಾಸಕರು ಬಿಜೆಪಿ ಹೋಗುತ್ತಾರೆ ಎನ್ನುವುದು ಅಪ್ಪಟ ಸುಳ್ಳು. ಬಿಜೆಪಿ ಮುಳುಗುತ್ತಿರುವ ದೋಣಿ. ಅದಕ್ಕೆ ಯಾರೂ ಹೋಗಲ್ಲ. ಬದಲಿಗೆ ಬಿಜೆಪಿಯವರೇ ಕಾಂಗ್ರೆಸ್ಗೆ ಬರುತ್ತಾರೆ’ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿರುವ 8 ಶಾಸಕರ ಪೈಕಿ 7 ಮಂದಿ ಕಾಂಗ್ರೆಸಿಗರು. ಬಿಜೆಪಿಯ ಒಬ್ಬ ಶಾಸಕ ಮಾತ್ರ ಇದ್ದಾರೆ. ಅವರು ಕೂಡ ಕಾಂಗ್ರೆಸ್ಗೆ ಬರುವ ಯೋಚನೆಯಲ್ಲಿದ್ದಾರೆ. ಕಾಂಗ್ರೆಸ್ನಿಂದ ಯಾರು ಕೂಡ ಹೊರ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.
‘ನಮ್ಮ ಸರ್ಕಾರದ ಯೋಜನೆಗಳಿಂದ ರಾಜ್ಯದ ಜನ ಸಂತೃಪ್ತಿಯಿಂದ ಇದ್ದಾರೆ. ಈ ಹೊತ್ತಿನಲ್ಲಿ ಒಂದು ಮನೆ, 100 ಬಾಗಿಲಿನಂತಾಗಿರುವ, ಸಮರ್ಥ ನಾಯಕರಿಲ್ಲದ, ದಿನವೂ ಕಚ್ಚಾಡುವ ಬಿಜೆಪಿ ಪಕ್ಷಕ್ಕೆ ಯಾರು ಹೋಗುತ್ತಾರೆ? ನಾಲ್ಕೈದು ಗುಂಪುಗಳಾಗಿರುವ ಬಿಜೆಪಿಯವರು ಮೊದಲು ಒಂದಾಗಲಿ. ನಂತರ ಬೇರೆಯವರನ್ನು ಸೇರ್ಪಡೆ ಮಾಡಿಕೊಳ್ಳಲಿ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.