ಹುಬ್ಬಳ್ಳಿ: ‘ಉತ್ತರ ಕರ್ನಾಟಕದಲ್ಲೂ ಜಾನಪದ ಇದೆ. ಆದರೆ, ಜಾನಪದ ಅಕಾಡೆಮಿಗೆ ಮೈಸೂರಿನವರೇ ಏಕೆ ಪ್ರತಿ ಬಾರಿಯೂ ಅಧ್ಯಕ್ಷರಾಗಬೇಕು’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸೋಮವಾರ ಇಲ್ಲಿ ಪ್ರಶ್ನಿಸಿದರು.
‘ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 60 ವರ್ಷದಿಂದ ಚುನಾಯಿತ ಅಧ್ಯಕ್ಷನಾದರೂ ನನ್ನನ್ನು ಇಲ್ಲಿ ಯಾರೂ ಕೇಳೋರಿಲ್ಲ. ಮೈಸೂರಿನಲ್ಲೋ, ಬೆಂಗಳೂರಿನಲ್ಲೋ ಇದ್ದಿದ್ದರೆ, ದೊಡ್ಡ ಕಥೆಯಾಗುತ್ತಿತ್ತು’ ಎಂದು ಹೇಳಿದರು.
‘ನಾನು ಬರಗೂರು ರಾಮಚಂದ್ರಪ್ಪನಲ್ಲ, ಶಿವರುದ್ರಪ್ಪನವರ ಅಳಿಯನೂ ಅಲ್ಲ. ಸಂಪ್ರದಾಯಬದ್ಧವಾಗಿ ಹೋರಾಟ ಮಾಡಿ ಮುಂದೆ ಬಂದಿದ್ದೇನೆ’ ಎಂದು ಟೀಕೆ ಮಾಡಿದರು.
‘ಟಿಪ್ಪುವಿಗೆ ಆದಷ್ಟು ಅನ್ಯಾಯ ಬೇರೆ ಯಾವ ನಾಯಕರಿಗೂ ಆಗಿಲ್ಲ. ಬೆಂಗಳೂರಿನಿಂದ ಹಿಡಿದು ಸೇಲಂವರೆಗೂ ಎಲ್ಲ ರಾಜರನ್ನು ಸೋಲಿಸಿದ್ದ. ಆದರೆ, ಗೋವಾ ಮಾತ್ರ ಗೆಲ್ಲಲಿಲ್ಲ. ಗೋವಾ ಗೆದ್ದಿದ್ದರೆ, ಮಹದಾಯಿ ನೀರಿಗಾಗಿ ಹೋರಾಟ ಮಾಡುವ ಪ್ರಸಂಗವೇ ಇರುತ್ತಿರಲಿಲ್ಲ’ ಎಂದರು.
ವಾಟಾಳ್ ನಾಗರಾಜ್ ಅವರ ಭೇಟಿ ಬಳಿಕ ಪಾಟೀಲ್ ಪುಟ್ಟಪ್ಪ ತಮ್ಮ ನಿವಾಸದಲ್ಲಿ ಮಾತನಾಡಿದರು.