ಬೆಂಗಳೂರು: ಅಮೋಘ ಸಾಮರ್ಥ್ಯದೊಂದಿಗೆ ಆಡಿದ ಎಮ್.ಅನರ್ಘ್ಯ ಹಾಗೂ ಸುಜನ್ ಭಾರದ್ವಾಜ್ ಇಲ್ಲಿ ನಡೆಯುತ್ತಿರುವ ಎಮ್.ಎಸ್ ರಾಮಯ್ಯ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಚಾಂಪಿಯನ್ ಆಗಿದ್ದಾರೆ.
ಸಬ್ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅನರ್ಘ್ಯ 9–11, 11–5, 5–11, 11–9, 11–8ರಲ್ಲಿ ಜಿ.ಯಶಸ್ವಿನಿ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಅನರ್ಘ್ಯ 11–9, 11–5, 14–12ರಲ್ಲಿ ಅದಿತಿ ಪಿ. ಜೋಷಿ ಎದುರು ಗೆದ್ದು ಫೈನಲ್ಗೆ ಲಗ್ಗೆಯಿಟ್ಟಿದ್ದರು.
ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸುಜನ್ 11–9, 11–6, 11–4ರಲ್ಲಿ ಕೆ.ಜೆ ಆಕಾಶ್ ವಿರುದ್ಧ ಗೆದ್ದರು. ಸೆಮಿಫೈನಲ್ನಲ್ಲಿ ಅವರು 11–7, 10–12, 11–9, 11–8ರಲ್ಲಿ ರತಿನ್ ಕಲೋಸ್ ಎದುರು ಜಯಗಳಿಸಿ ಫೈನಲ್ ತಲುಪಿದ್ದರು.
ಯಶಸ್ವಿನಿ, ಸುಜನ್ಗೆ ಪ್ರಶಸ್ತಿ: ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಜಿ. ಯಶಸ್ವಿನಿ 13–11, 11–4, 11–9, 13–11ರಲ್ಲಿ ಡಿ. ಕಲ್ಯಾಣಿ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದರು.
ಸುಜನ್ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಬೀಗಿದರು. ಜೂನಿಯರ್ ವಿಭಾಗದ ಫೈನಲ್ನಲ್ಲಿ ಅವರು 11–3, 11–9, 11–8, 11–8ರಲ್ಲಿ ಎಸ್. ಕೃಷ್ಣ ಎದುರು ಗೆದ್ದರು.