ಬೆಳವಣಿಕಿ (ರೋಣ ತಾ.): ಮೂರು ದಿನಗಳಿಂದ ಗ್ರಾಮದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗಿದ್ದರಿಂದ ಜಮೀನುಗಳಲ್ಲಿ ನೀರು ನಿಂತಿದ್ದು, ಶೇಂಗಾ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ, ಜೋಳ, ಕಡಲೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ.
‘ಕಳೆದ ನಾಲ್ಕು ವರ್ಷಗಳಿಂದ ಸತತ ಬರ ಇತ್ತು. ಈ ವರ್ಷ ಹಿಂಗಾರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದ್ದು, ಜಮೀನಿಗೆ ನೀರು ನುಗ್ಗಿ, ಬೆಳೆಗಳು ಹಾನಿಗೀಡಾಗಿವೆ. ಗ್ರಾಮದಲ್ಲಿ ಕೆಲವು ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಹಾಳಾಗಿವೆ. ಮಳೆ ಬಿಡುವು ನೀಡದ ಕಾರಣ ಬಿತ್ತನೆ ಕಾರ್ಯಕ್ಕೂ ಅಡ್ಡಿಯಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
‘ಸುತ್ತಮುತ್ತಲಿನ ಗ್ರಾಮಗಳ ಹಳ್ಳಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಹಳ್ಳಗಳನ್ನು ದಾಟಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗಲು ಕಷ್ಟವಾಗಿದೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಂದ ದೂರ ಉಳಿಬೇಕಾದ ಪರಿಸ್ಥಿತಿ ಬಂದಿದೆ. 10 ವರ್ಷಗಳ ಹಿಂದೆ ಈ ರೀತಿ ಮಳೆ ಆಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮದ ರೈತ ಶರಣಪ್ಪ ಹದ್ಲಿ.