ಹಾಸನ: ಬಾಳೆಹಣ್ಣಿನ ಬೆಲೆಯಲ್ಲಿ ದೀಢಿರ್ ಇಳಿಕೆಯಾಗಿದೆ. ಕಳೆದ ವಾರ ಕೆ.ಜಿ. ಬಾಳೆಹಣ್ಣು ₹ 120 ಕ್ಕೆ ಇದ್ದದ್ದು, ಈಗ ₹ 80ಕ್ಕೆ ಇಳಿದಿದೆ. ರಾಜ್ಯಾದಾದ್ಯಂತ ಉತ್ತಮ ಮಳೆಯಾಗುತ್ತಿರುವ ಕಾರಣ ಬಾಳೆ ಫಸಲು ಉತ್ತಮವಾಗಿದೆ. ಚಾಮರಾಜನಗರ, ದಾವಣಗೆರೆ ಹಾಗೂ ಮೈಸೂರಿನಿಂದಲೂ ಹಾಸನಕ್ಕೆ ಬಾಳೆ ಹಣ್ಣು ಆವಕವಾಗುತ್ತಿದೆ. ಜತೆಗೆ ಸಕಲೇಶಪುರ, ಅರಕಲಗೂಡು, ಹೊಳೆನರಸಿಪುರ, ಬೇಲೂರಿನ ಕೆಲ ಭಾಗಗಳಲ್ಲೂ ಬಾಳೆ ಹಣ್ಣು ಬೆಳೆಯಲಾಗುತ್ತದೆ.
‘ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಾಳೆಹಣ್ಣು ಬರುತ್ತಿದ್ದು, ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ಜೋರಾಗಿ ಇರಬೇಕಿತ್ತು. ಆದರೆ ಮಳೆ ನಿರಾಸೆ ಮೂಡಿಸಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ವ್ಯಾಪಾರ ಸುಧಾರಿಸಬಹುದು’ ಎನ್ನುತ್ತಾರೆ ಬಾಳೆಹಣ್ಣಿನ ವ್ಯಾಪಾರಿ ಅಸ್ಲಾಂ ಪಾಷ.
ಹಾಗೆಯೇ ಕೊತ್ತಂಬರಿ, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ₹ 5 ರಿಂದ ₹ 6 ರಂತೆ ಮಾರುತ್ತಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ತರಕಾರಿ ಬೆಲೆಯಲ್ಲಿ ಅಂತಹ ಏರಿಕೆ ಕಂಡುಬಂದಿಲ್ಲ.