ಮಾಲೂರು: ತಾಲ್ಲೂಕಿನ ಪುರ ಗ್ರಾಮದಲ್ಲಿ ಸೋಮವಾರ ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು ₹ 8 ಲಕ್ಷ ಮೌಲ್ಯದ 600 ಕೆ.ಜಿ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಶ್ರೀನಿವಾಸ್ ಎಂಬಾತ ಒಂದೂವರೆ ಎಕರೆ ಜಮೀನಿನಲ್ಲಿ ಚಿಕ್ಕಡಿ ಕಾಯಿ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆದಿದ್ದ. ಈ ಬಗ್ಗೆ ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಶ್ರೀನಿವಾಸ್ ತಲೆಮರೆಸಿಕೊಂಡಿದ್ದಾನೆ. ‘ಆರೋಪಿಗೆ ಗಾಂಜಾ ಸಸಿಗಳನ್ನು ಕೊಟ್ಟವರು ಯಾರು ಮತ್ತು ಆತ ಎಲ್ಲಿಗೆ ಗಾಂಜಾ ಸೊಪ್ಪು ಪೂರೈಸುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.