ಮದ್ದೂರು: ‘ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದ ಯಾವುದೇ ಸದಸ್ಯರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದರು.'
ಸಮೀಪದ ನಿಡಘಟ್ಟದಲ್ಲಿ ಸುದ್ದಿಗಾರರೊಡನೆ ಅವರು ಮಾತನಾಡಿದರು. ‘ನಿಮ್ಮ ಪುತ್ರಿ ನಿಶಾ ಅವರನ್ನು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆಗಿಳಿಸುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಈ ಚುನಾವಣೆಯ ಹೋರಾಟ, ಪರದಾಟ ನನಗೆ ಸಾಕು. ನನ್ನ ಕುಟುಂಬದವರಿಗೆ ಅದು ಬೇಡ’ ಎಂದರು.
‘ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸಲು ಯೋಜಿಸಿದ್ದೇನೆ. ಅದು ಸಾಧ್ಯವಾಗದಿದ್ದಲ್ಲಿ ನನ್ನ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಲ್ಲಿ ಇರುವ ಪ್ರಭಾವಿಯೊಬ್ಬರನ್ನು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸುತ್ತೇನೆ’ ಎಂದು ಹೇಳಿದರು.
’ಯಾವುದೇ ಪಕ್ಷ ಸೇರ್ಪಡೆ ವಿಚಾರವನ್ನು ನ. 22ರಂದು ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸಿ, ಅಲ್ಲಿ ತೆಗೆದುಕೊಳ್ಳಲಾಗುವ ತಿರ್ಮಾನಕ್ಕೆ ಬದ್ಧನಾಗುವೆ’ ಎಂದು ಅವರು ತಿಳಿಸಿದರು. ತಾ.ಪಂ. ಸದಸ್ಯ ತೈಲೂರು ಚಲುವರಾಜು ಈ ಸಂದರ್ಭದಲ್ಲಿ ಇದ್ದರು.