ಮೈಸೂರು: ದೇಶದ ಗಡಿ ಭದ್ರತೆಗಿಂತಲೂ ಆಹಾರ ಭದ್ರತೆ ಅಗತ್ಯ ಎಂದು ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಆರ್.ಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಆಹಾರ ದಿನಾಚರಣೆ ಅಂಗವಾಗಿ ನಗರದ ಯುವರಾಜ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ವಲಸೆ ತಡಗಟ್ಟುವ ಕ್ರಮ: ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೂಡಿಕೆ’ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರವೇ ಇಲ್ಲದಿದ್ದರೆ ಗಡಿಯಲ್ಲಿ ಸೈನಿಕ ಸಹ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲ ಆದ್ಯತೆಯನ್ನು ಆಹಾರ ಉತ್ಪಾದನೆಗೆ ನೀಡಬೇಕು. ದೇಶದ ಬೆನ್ನೆಲುಬಾಗಿರುವ ರೈತರನ್ನು ನಿರ್ಲಕ್ಷಿಸಿದರೆ ದೇಶದ ಎಲ್ಲ ವ್ಯವಸ್ಥೆಗಳೂ ಬುಡಮೇಲಾಗುತ್ತವೆ ಎಂದು ಎಚ್ಚರಿಸಿದರು. ದೇಶದಾದ್ಯಂತ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದಂತೆ ಸ್ವಚ್ಛ ಆಹಾರ ಅಭಿಯಾನವನ್ನೂ ನಡೆಸುವ ಮೂಲಕ ಆಹಾರ ಪದಾರ್ಥಗಳಲ್ಲಿ ಆಗುತ್ತಿರುವ ಕಲಬೆರಕೆ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರ ಜೀವನೋಪಾಯಕ್ಕಾಗಿ ನಗರಗಳಿಗ ವಲಸೆ ಬರುತ್ತಿದ್ದಾರೆ. ಅದನ್ನು ತಡೆದು, ಅವರಿಗೆ ಗೌರವ ನೀಡುವುದರ ಜೊತೆಗೆ ಎಲ್ಲ ಸವಲತ್ತುಗಳನ್ನು ನೀಡದಿದ್ದರೆ ನಗರಗಳಲ್ಲಿರುವ ಜನತೆ ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವಿಶ್ವ ಆಹಾರ ದಿನ ಆಚರಣೆಯ ಆರಂಭ ಹಾಗೂ ‘ವಲಸೆ ತಡಗಟ್ಟುವ ಕ್ರಮ: ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೂಡಿಕೆ’ ಶೀರ್ಷಿಕೆಯಡಿ ಈ ವರ್ಷ ಕಾರ್ಯಕ್ರಮವನ್ನು ಆಯೋಜಿಸಿರುವ ಕುರಿತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹೇಶ್ ವಿವರಿಸಿದರು. ವಿಶ್ವ ಆಹಾರ ದಿನದ ಅಂಗವಾಗಿದ್ದ ಅಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಂಡ್ಯ ಕೃಷಿ ಕಾಲೇಜಿನ ಆನುವಂಶಿಕ ಮತ್ತು ಸಸ್ಯ ತಳಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಸಿ.ಲೋಹಿತಾಶ್ವ ಹಾಗೂ ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಜಮುನಾ ಪ್ರಕಾಶ್ ಹಾಗೂ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.
ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಎಚ್.ಎನ್.ಕಾಂತಲಕ್ಷ್ಮಿ, ಪರೀಕ್ಷಾ ನಿಯಂತ್ರಕ ಡಾ.ಬಿ.ಎಂ.ವೆಂಕಟೇಶ್, ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಆರ್. ಶೇಖರ ನಾಯ್ಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.