ಲಖನೌ: ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಅದನ್ನು ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು ಎಂಬುದು ಮುಖ್ಯವಲ್ಲ. ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ತಾಜ್ ಮಹಲ್ ಒಂದು ಪ್ರಮುಖ ಸ್ಮಾರಕ ಎಂಬುದನ್ನು ಒತ್ತಿಹೇಳಿದ ಅವರು, ಪ್ರವಾಸಿಗರಿಗೆ ಸೌಕರ್ಯಗಳನ್ನೊದಗಿಸುವುದು ಮತ್ತು ಅವರ ಸುರಕ್ಷತೆ ನಮ್ಮ ಸರ್ಕಾರದ ಆದ್ಯತೆ ಎಂದೂ ಹೇಳಿದರು.
ಯೋಗಿ ಆದಿತ್ಯನಾಥ್ ಅವರು ಇದೇ ತಿಂಗಳ 25ರಂದು ಆಗ್ರಾಕ್ಕೆ ತೆರಳಲಿದ್ದು, ಆ ಸಂದರ್ಭ ತಾಜ್ ಮಹಲ್ ಸೇರಿ ಇತರ ಸ್ಮಾರಕಗಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ.
ಮೊಘಲರು ದ್ರೋಹಿಗಳು ಎಂದಿದ್ದ ಸಂಗೀತ್ ಸೋಮ್, ಅವರಿಂದ ನಿರ್ಮಾಣವಾದ ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿ ಕಪ್ಪು ಚುಕ್ಕೆ. ಅದನ್ನು ಕಟ್ಟಿಸಿದ ಶಹಜಹಾನ್ನಂಥವರು ನಮ್ಮ ಇತಿಹಾಸದ ಭಾಗವಾದರೆ ಅದು ಖೇದಕರ. ಅಂಥ ಇತಿಹಾಸವನ್ನು ನಾವು ಬದಲಿಸುತ್ತೇವೆ ಎಂದು ಹೇಳಿದ್ದರು.